ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣದ ಪತ್ರ ವಿವಾದದ ಬಗ್ಗೆ ಶಾಸಕ ತನ್ವೀರ್ ಶೇಠ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಾನು ಯಾವುದೇ ಒಂದು ಕೋಮಿನ ವಿಚಾರದಲ್ಲಿ ಪತ್ರ ಬರೆದು ಪ್ರಸ್ತಾಪ ಮಾಡಿಲ್ಲ. ಅಮಾಯಕರನ್ನು ದಸ್ತಗಿರಿ ಮಾಡಿ ಶಿಕ್ಷೆ ನೀಡಿರುವ ವಿಚಾರವಾಗಿ ಪ್ರಸ್ತಾಪ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಬಿಜೆಪಿ (BJP) ಸರ್ಕಾರ ಇದ್ದಾಗಲೂ ನಾನು ಮನವಿ ಮಾಡಿಕೊಂಡಿದ್ದೆ. ಆದರೆ ಆಗ ಅದು ಹೊರಗೆ ಬಂದಿರಲಿಲ್ಲ. ಯಾವುದೇ ಒಳ್ಳೆ ಕೆಲಸ ಮಾಡಬೇಕಾದರೂ ಟೀಕೆಗಳು ಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ನಾನು ಯಾವ ಅಮಾಯಕರ ಹೆಸರನ್ನು ಹೇಳಿಲ್ಲ. ಅವರು ಎಷ್ಟು ಜನ ಇದ್ದಾರೆ ಎಂದು ಸಹ ಲೆಕ್ಕ ಮಾಡಿಲ್ಲ. ಅಮಾಯಕರಿದ್ದಾರೆ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದೇನೆ. ಪತ್ರ ಬರೆದಿದ್ದು ನಿಜ. ಆದರೆ ಒಂದು ಕೋಮಿನ ಬಗ್ಗೆ ಉಲ್ಲೇಖಿಸಿ ಪತ್ರ ಬರೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಟ್ಟವರು, ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರನ್ನು ನಾನು ಅಮಾಯಕರು ಎಂದು ಕರೆದಿಲ್ಲ. ಅಮಾಯಕರಿಗೆ ನ್ಯಾಯ ಕೊಡಿ ಎಂದಿದ್ದೇನೆ. ಈಗ ಸರ್ಕಾರ ಯಾರು ಅಮಾಯಕರು ಎಂದು ನಿರ್ಧರಿಸಬೇಕು. ಆಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದಿದ್ದಾರೆ. ತನ್ವೀರ್ ಸೇಠ್ ಬರೆದ ಪತ್ರದಲ್ಲಿ ಪೊಲೀಸರ ಬಗ್ಗೆ ಉಲ್ಲೇಖಿಸಲಾಗಿದ್ದು, ಪೊಲೀಸರು ಒಂದು ಕೋಮಿನ ಯುವಕರ ಗುರಿಯಾಗಿಸಿದ್ದಾರೆ. ಒಂದು ಕೋಮಿನ ಯುವಕರನ್ನೇ ಬಂಧಿಸಿದ್ದಾರೆ ಎಂದು ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ನಡೆದ ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ನಿರ್ದಿಷ್ಟ ಕೋಮಿನ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪೊಲೀಸ್ ದೂರುಗಳನ್ನು ದಾಖಲಿಸಿರುತ್ತಾರೆ. ಅದರಲ್ಲಿ ಅನೇಕ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳು ಕಾರಾಗೃಹದಲ್ಲಿದ್ದು, ಸುಳ್ಳು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಇವರ ಜೀವನ ಅಂಧಕಾರದಲ್ಲಿ ಮುಳುಗಿದೆ ಹಾಗೂ ಅನೇಕ ಕುಟುಂಬಗಳ ಭವಿಷ್ಯ ಹಾಳಾಗಿದೆ. ಅಮಾಯಕ ಯುವಕರು, ವಿದ್ಯಾರ್ಥಿಗಳ ಅವಲಂಬಿತ ಕುಟುಂಬಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಡಿಜೆಹಳ್ಳಿ, ಕೆಜಿಹಳ್ಳಿ, ಮರು ಪರಿಶೀಲಿಸಿ ನಿಯಮಾನುಸಾರ ಹಿಂಪಡೆಯಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಉಲ್ಲೇಖಿಸಲಾಗಿದೆ.