ಬೆಂಗಳೂರು : ಜೀವನ ಶೈಲಿ ಬದಲಾವಣೆಯಿಂದಾಗಿ ಮಕ್ಕಳು, ಯುವಕರಲ್ಲಿ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಜಯ ದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ತಿಳಿಸಿದರು.
ಯುವ ಜನರಿಗೆ ತೂಕ ಕಡಿಮೆ ಮಾಡುವ ಉತ್ಸಾಹ ಬೇಡ. ಅತೀ ವ್ಯಾಯಾಮದಿಂದ ರಕ್ತನಾಳಗಳಿಗೆ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೃದಯಾಘಾತದ ಸುಳಿವು ಸಿಗುತ್ತದೆ. ಇನ್ನೂ ಕೆಲವರಿಗೆ ಸುಳಿವು ಸಿಗುವುದಿಲ್ಲ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ. ಮಂಜುನಾಥ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುವಕರಲ್ಲಿ ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಕಳೆದ 10 ವರ್ಷದಲ್ಲಿ 22% ಹೆಚ್ಚಾಗಿದೆ. ಕೆಲವರು ನಾರ್ಕೋಟಿಕ್ ಡ್ರಗ್ಸ್, ಹುಕ್ಕಾ ಬಾರ್, ಗಾಂಜಾ ಸೇವಿಸುತ್ತಿದ್ದಾರೆ. ಕಳೆದ 6 ವರ್ಷಗಳಲ್ಲಿ 5500ಕ್ಕೂ ಹೆಚ್ಚು ಯುವಕರಿಗೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಹೆಚ್ಚಾಗಿ ದುಶ್ಚಟಗಳು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಧೂಮಪಾನ, ಮಧ್ಯಪಾನ, ಒತ್ತಡ ಹಾಗೂ ಅಧಿಕ ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸುತ್ತಿವೆ. ಜಂಕ್ ಫುಡ್ ಸಹ ಇದಕ್ಕೆ ಕಾರಣವಾಗಿದ್ದು ಅದನ್ನು ತ್ಯೆಜಿಸುವುದೇ ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಹೆಚ್ಚಿನ ಶ್ರಮದಾಯಕ ವ್ಯಾಯಾಮ ಮಾಡುವುದು ಹಾಗೂ ಎನರ್ಜಿ ಡ್ರಿಂಕ್ಸ್ ಬಳಕೆ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಈ ಬಗೆಯ ಶ್ರಮದಾಯಕ ವ್ಯಾಯಾಮ ಮಾಡುವವರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವರಿಗೆ ಆರೋಗ್ಯದ ಸಮಸ್ಯೆ ಇಲ್ಲದೆಯೂ ಹೃದಯಾಘಾತಗಳು ಆಗುತ್ತಿವೆ. ಅಲ್ಲದೇ ಅಂತವರಿಗೆ ಯಾವುದೇ ದುಶ್ಚಟಗಳು ಇಲ್ಲದೇ ಹೃದಯಾಘಾತಗಳಾಗಿವೆ. ಹೀಗಾಗಿ 35 ವರ್ಷ ಹೆಚ್ಚಾದ ಮೇಲೆ ವಾರ್ಷಿಕವಾಗಿ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.