ಬೆಂಗಳೂರು : ಕರ್ನಾಟಕದಲ್ಲಿ ಹುಲಿಗಳ ಅಸ್ತಿತ್ವ ಕುರಿತ ಎ.ಐ.ಟಿ.ಇ.-2022ರ ವರದಿಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಮಾತನಾಡಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿಗಣತಿಯ ಕರ್ನಾಟಕದ ವರದಿಯನ್ನು ಬಿಡುಗಡೆ ಮಾಡಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ನನಗೆ ಸಂತೋಷ ತಂದಿದೆ ಎಂದಿದ್ದಾರೆ.
ಕಳೆದ ಬಾರಿಯ ಹುಲಿ ಗಣತಿಯಲ್ಲಿ ರಾಜ್ಯದಲ್ಲಿ 404 ಹುಲಿಗಳು ಕ್ಯಾಮೆರಾ ಟ್ರ್ಯಾಪ್ ಆಗಿದ್ದವು. ಈ ಬಾರಿ 435 ಹುಲಿಗಳು ಗೋಚರಿಸಿರುವುದು ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. 1972 ರಿಂದ ಭಾರತದಲ್ಲಿ ಹುಲಿಗಣತಿ ನಡೆಯುತ್ತಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೈಗೊಂಡ ಅರಣ್ಯ ಸಂರಕ್ಷಣೆ ಕ್ರಮಗಳಿಂದಾಗಿ ಅರಣ್ಯವೂ ಉಳಿದಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಿದೆ. ವಿಶ್ವಾದ್ಯಂತ ಅಳವಿನಂಚಿನಲ್ಲಿದ್ದ ಹುಲಿಗಳ ಸಂತತಿ ಭಾರತದಲ್ಲಿ ಹೆಚ್ಚಳವಾಗುತ್ತಿದೆ.
ಹುಲಿಗಣತಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಂತಾರಾಷ್ಟ್ರೀಯ ಹುಲಿ ದಿನದ ಸಂದರ್ಭದಲ್ಲಿ ಎಲ್ಲಾ ವನ್ಯಜೀವಿ ಮತ್ತು ಪರಿಸರ ಪ್ರಿಯರಿಗೂ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಉಪಸ್ಥಿತರಿದ್ದರು.