ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲಿಯೇ ಅವರು ಆರೋಪಗಳಿಂದ ಮುಕ್ತವಾಗುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಓದಿ :- ಸಂತೋಷ್ ಸ್ನೇಹಿತ ಸಹ ಕಮಿಷನ್ ಬಗ್ಗೆ ಹೇಳಿದ್ದಾರೆ – ಸಿದ್ದರಾಮಯ್ಯ
ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಜೆ ಜಾರ್ಜ್ ರಾಜೀನಾಮೆ ನೀಡಿದ ನಂತರ ಅವರ ಬಂಧನವಾಗಿತ್ತೇ, ಆಗ ಬಿಜೆಪಿ ನಾಯಕರು ಜಾರ್ಜ್ ಅವರ ಬಂಧನಕ್ಕೆ ಆಗ್ರಹಿಸಿರಲಿಲ್ಲ ಎಂದು ಹೇಳಿದರು. ವಿರೋಧ ಪಕ್ಷದವರು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಹೇಳಿಕೆಗಳನ್ನು, ತೀರ್ಮಾನಗಳನ್ನು ಕೊಡಲು ಅವರೇನು ನ್ಯಾಯಾಧೀಶರೇ ಅಥವಾ ಪೊಲೀಸರೇ, ಪ್ರಕರಣವನ್ನು ಈಗಾಗಲೇ ತನಿಖೆಗೊಪ್ಪಿಸಲಾಗಿದ್ದು ಸತ್ಯಾಸತ್ಯತೆ ಹೊರಬರಲಿ ಎಂದರು.
ಇಂದು ಸಂಜೆ ಸಚಿವ ಸ್ಥಾನಕ್ಕೆ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ, ಈಶ್ವರಪ್ಪ ತಮ್ಮದೇ ನಿರ್ಧಾರದಿಂದ ರಾಜೀನಾಮೆ ನೀಡುತ್ತಿದ್ದಾರೆ, ಈ ವಿಷಯದಲ್ಲಿ ಬಹಳ ಸ್ಪಷ್ಟವಾಗಿದ್ದಾರೆ. ನಿನ್ನೆ ರಾತ್ರಿ ದೂರವಾಣಿ ಮೂಲಕ ಅವರಲ್ಲಿ ಮಾತನಾಡಿದ್ದೇನೆ, ಎಲ್ಲಾ ಆಯಾಮಗಳಿಂದ ಪ್ರಕರಣದ ತನಿಖೆ ಶೀಘ್ರವೇ ಮಾಡಿ ಎಂದು ಹೇಳಿದ್ದಾರೆ, ಆದಷ್ಟು ಬೇಗ ಅವರು ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದನ್ನು ಓದಿ :- ಮೊದಲು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ- ಎಚ್.ಡಿ.ಕೆ