ಎಚ್ ಎ ಎಲ್ ಗೆ ಕೇಂದ್ರದಿಂದ 48 ಸಾವಿರ ಕೋಟಿ
ಬೆಂಗಳೂರು : ತೇಜಸ್ ಜೆಟ್ ಅನ್ನು ಸರಬರಾಜು ಮಾಡಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎ ಎಲ್)ಗೆ ಕೇಂದ್ರ ಸರಕಾರ 48. ಸಾವಿರ ಕೋಟಿ ರೂಪಾಯಿಯ ಗುತ್ತಿಗೆ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಅಂತಾರಾಷ್ಟ್ರೀಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೆ, ಭಾರತೀಯ ವಾಯುಪಡೆಗೆ 83 ಅತ್ಯಾಧುನಿಕ (ಎಲ್ ಸಿಎ ಎಂಕೆ-1ಎ) ಖರೀದಿಸಲು ಕೇಂದ್ರ ಸರಕಾರ ಮುಂದಾಗಿದೆ.
ತೇಜಸ್ ವಿಮಾನ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ರಕ್ಷಣಾ ಸಮಿತಿ ಸಭೆಯಲ್ಲಿ, ಭಾರತೀಯ ವಾಯುಪಡೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು 83 ಅತ್ಯಾಧುನಿಕ ತಂತ್ರಜ್ಞಾನದ ತೇಜಸ್ ಜೆಟ್ ಖರೀದಿಗೆ ಜನವರಿ 13ರಂದು ಒಪ್ಪಿಗೆ ನೀಡಿತ್ತು. ಇದೊಂದು ಅತೀ ದೊಡ್ಡ ದೇಶೀ ರಕ್ಷಣಾ ವ್ಯವಹಾರದ ಒಪ್ಪಂದವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ರಕ್ಷಣಾ ಸಮಿತಿಯ ಅನುಮತಿ ಪಡೆದು ಹತ್ತು ತಿಂಗಳ ನಂತರ ದೇಶೀ ಸಂಸ್ಥೆಯಾದ ಎಚ್ ಎಎಲ್ ನಿಂದ 83 ಲಘು ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಹಸಿರು ನಿಶಾನೆ ತೋರಿಸಿರುವುದಾಗಿ ತಿಳಿಸಿದರು.
ಈಗಾಗಲೇ ಕೇಂದ್ರ ರಕ್ಷಣಾ ಸಚಿವಾಲಯ 40 ತೇಜಸ್ ಯುದ್ಧ ವಿಮಾನ ಖರೀದಿಗೆ ಅನುಮತಿ ನೀಡಿದೆ. 83 ಲಘು ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದದ ಜೊತೆಗೆ ಒಟ್ಟು ಆರ್ಡರ್ ನೀಡಿದ ತೇಜಸ್ ಯುದ್ಧ ವಿಮಾನಗಳ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. ಏರೋ ಇಂಡಿಯಾ 2021 ಆಯೋಜನೆ ಮಾಡಿದ್ದಕ್ಕೆ ಸಿ.ಎಂ ಯಡಿಯೂರಪ್ಪನವರನ್ನು ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಇದರ ಜೊತೆಗೆ ರಾಜ್ಯ ಸರಕಾರದಿಂದ BEML, BEL ಸೇರಿದಂತೆ ಎಲ್ಲಾ ಇಂಡಸ್ಟ್ರೀಗಳನ್ನು ಅಭಿವೃದ್ಧಿಗೊಳಿಸಲಾಗುವುದು, ನಮ್ಮ ಸರಕಾರ HAL ಗೆ ಉತ್ತಮ ಸಹಕಾರ ನೀಡಲಿದೆ ಎಂದರು.