ಬೆಂಗಳೂರು: ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಆಪರೇಷನ್ ಕಮಲ ಹುಟ್ಟು ಹಾಕಿದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅವರನ್ನು ಆಪರೇಷನ್ ಕಮಲದ ಜನಕ ಎಂದರೆ ತಪ್ಪಿಲ್ಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಸಿದ್ದರಾಮಯ್ಯ ಅವರು, ಪಾಪದ ಹಣ ಖರ್ಚು ಮಾಡಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಸೆಳೆದು ಸರ್ಕಾರ ರಚನೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರಿಗೆ ಘನತೆ, ಗೌರವ ಇರುತ್ತದೆ, ಆದ್ರೆ ಸರ್ಕಾರ ರಾಜ್ಯಪಾಲರಿಂದಲೂ ಸುಳ್ಳು ಹೇಳಿಸಿದೆ ಅಂತಾ ದೂರಿದರು.
ರಾಜ್ಯಪಾಲರ ಭಾಷಣದಲ್ಲಿ ಸತ್ಯ ಇಲ್ಲ. ದೂರದೃಷ್ಠಿಯಿಲ್ಲ. ಅದರಲ್ಲಿ ಯಾವುದೇ ಸತ್ವ ಇಲ್ಲ ನಮ್ಮ ಯೋಜನೆಗಳನ್ನು ಪ್ರಸ್ತಾಪ ಮಾಡಿ ನಮ್ಮ ಸಾಧನೆಯನ್ನು ತಮ್ಮದು ಎಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಂವಿಧಾನಕ್ಕೆ ವಿರುದ್ದವಾಗಿ ಹುಟ್ಟಿಕೊಂಡ ಸರ್ಕಾರವಿದು. ಈ ವೇಳೆ ಸಿದ್ದರಾಮಯ್ಯ ಮಾತಿಗೆ ಸಚಿವ ಭೈರತಿ ಬಸವರಾಜ್ ವಿರೋಧ ವ್ಯಕ್ತಪಡಿಸಿದರು. ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಅನೈತಿಕವಾಗಿ ಹುಟ್ಟಿದ ಅಂಗ ವೈಫಲ್ಯ ಸರ್ಕಾರವಿದು ಎಂದು ಸರಕಾರವನ್ನು ಜರಿದರು.
ಈ ರೀತಿ ಹುಟ್ಟಿರುವ ಸರ್ಕಾರದಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ನಿಮ್ಮ ಸರ್ಕಾರ ಟೇಕ್ ಆಫ್ ಆಗಿಲ್ಲ ಅಂತಾ ಬಿಜೆಪಿಯವರು ವಿರೋಧ ಪಕ್ಷದವರಾಗಿದ್ದಾಗ ಹೇಳುತ್ತಿದ್ದರು. ನಮ್ಮದು ಟೇಕ್ ಆಫ್ ಆಗಿಲ್ಲ ಎಂದವರ ಸರ್ಕಾರ ಈಗ ಟೇಕ್ ಆಫ್ ಅಲ್ಲಾ ಆಫ್ ಆಗಿದೆ ಎಂದು ಲೇವಡಿ ಮಾಡಿದರು. ಈ ಸರ್ಕಾರ ಡಕೋಟಾ ಎಕ್ಸ್ಪ್ರೆಸ್ ಸಿನಿಮಾದ ಬಸ್ ನಂತಿದೆ. ರಸ್ತೆಯಲ್ಲೇ ಡಕೋಟಾ ಬಸ್ ರೀತಿ ಕೆಟ್ಟು ಹೋಗಿದೆ. ಗೇರ್ ಹಾಕೋಕೆ ಆಗೋದಿಲ್ಲ, ಹಾಕಿದ್ರು ಗೇರ್ ಕಿತ್ತಿಕೊಂಡು ಬರುತ್ತೆ. ಆ ರೀತಿ ಸರ್ಕಾರ ಆಗಿದೆ ಎಂದು ವಾಗ್ದಾಳಿ ನಡೆಸಿದರು.