ಪಾಕಿಸ್ತಾನ ಕುತಂತ್ರ ಗಡಿಗೆಷ್ಟೇ ಸೀಮಿತ : ರಕ್ಷಣಾ ಸಚಿವ ರಾಜನಾಥ ಸಿಂಗ್

ನವದೆಹಲಿ: ದೇಶದ ಗಡಿ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ, ಪಾಕಿಸ್ತಾನದ ಕುತಂತ್ರವನ್ನು ಭಾರತೀಯ ಸೇನೆ ಗಡಿಗೆಷ್ಟೇ ಸೀಮಿತಗೊಳಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ, ಕದನ ವಿರಾಮ ಉಲ್ಲಂಘನೆ ತಡೆಯುವಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪಾಕಿಸ್ತಾನದ ಕುಚೋದ್ಯವನ್ನು ಗಡಿಗಷ್ಟೇ ಸೀಮಿತಗೊಳಿಸುವ ಮೂಲಕ ಅವರ ದುಷ್ಕೃತ್ಯಕ್ಕೆ ಭಾರತೀಯ ಸೇನೆಯು ತಕ್ಕ ಉತ್ತರ ನೀಡಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಚಟುವಟಿಕೆಗಳನ್ನು ಸಂಚನ್ನು ಭಾರತೀಯ ಸೇನೆ, ಬಿಎಸ್ಎಫ್ ಮತ್ತು ಇತರ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಿವೆ. ಗಡಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸೇನೆಯು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ.
ನಾವು ಅಧಿಕಾರಕ್ಕೆ ಬಂದ ನಂತರ ಸೇನೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳುತ್ತಿಲ್ಲ. ನಮ್ಮ ಸೇನೆಯು ಮೊದಲಿನಿಂದಲೂ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದೆ. ಕದನ ವಿರಾಮ ಉಲ್ಲಂಘನೆ ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ವಿವರಗಳನ್ನು ನೀಡುವುದು ಸೂಕ್ತವಲ್ಲ.
ಗಡಿಯಾಚೆಗಿನ ಗುಂಡಿನ ದಾಳಿ ಸೇರಿದಂತೆ 2020ರಲ್ಲಿ 5,133 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. 2021ರ ಜನವರಿ 28ರ ವರೆಗೆ 299 ಬಾರಿ ಉಲ್ಲಂಘನೆ ಪ್ರಕರಣಗಳು ನಡೆದಿವೆ. 2020ರಲ್ಲಿ 46 ಮಂದಿ ಮೃತಪಟ್ಟಿದ್ದಾರೆ. 2021ರ ಫೆಬ್ರುವರಿ 1ರವರೆಗೆ ಒಬ್ಬ ಯೋಧ ಮೃತಪಟ್ಟ ವರದಿಯಾಗಿದೆ ಎಂದು ಅವರು ತಿಳಿಸಿದರು.