ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಾಲ್ (KAPIL SIBAL) ಕಾಂಗ್ರೆಸ್ (CONGRESS) ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಕೈ ಪಾಳಯಕ್ಕೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಬಯಸಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಪಿಲ್ ಸಿಬಲ್, ಮೇ 16ರಂದೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಪಿಲ್ ಸಿಬಾಲ್ ನಾಮಪತ್ರ ಸಲ್ಲಿಕೆ ವೇಳೆ ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಉಪಸ್ಥಿತರಿದ್ದರು.
ಸಂಸತ್ನಲ್ಲಿ ಮಾತನಾಡಲು ಒಂದು ಸ್ವತಂತ್ರ ದನಿ ಬೇಕಿತ್ತು. ಯಾವುದೇ ಒಂದು ಪಕ್ಷಕ್ಕೆ ಸೇರದೆ ನಾನು ಸ್ವತಂತ್ರವಾಗಿ ದನಿ ಎತ್ತಿದರೆ ಜನತೆಗೆ ನಂಬಿಕೆ ಹುಟ್ಟುತ್ತದೆ ಎಂದೂ ಕಪಿಲ್ ಸಿಬಲ್ ಹೇಳಿದ್ದಾರೆ.
ಕಾಂಗ್ರೆಸ್ನ ಗಾಂಧಿ ಪರಿವಾರದ ವಿರುದ್ಧ ಸಿಡಿದೆದ್ದ ಜಿ – 23 ಭಿನ್ನ ನಾಯಕ ಗುಂಪಿನ 23 ಹಿರಿಯ ಕಾಂಗ್ರೆಸ್ಸಿಗರ ಪೈಕಿ ಕಪಿಲ್ ಸಿಬಲ್ ಕೂಡಾ ಒಬ್ಬರಾಗಿದ್ದರು. ಪಕ್ಷದ ನಾಯಕತ್ವ ಹಾಗೂ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಬೇಕೆಂದು ಆಗ್ರಹಿಸಿದ್ದವರ ಪೈಕಿ ಕಪಿಲ್ ಸಿಬಲ್ ಮೊದಲಿಗರಾಗಿದ್ದರು. ಗಾಂಧಿ ಪರಿವಾರದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಕಪಿಲ್ ಸಿಬಲ್, ನಾಯಕತ್ವ ಬದಲಾವಣೆಗೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ತರಬೇಕೆಂದು ಆಗ್ರಹಿಸಿದ್ದರು.
ಇದನ್ನೂ ಓದಿ :- ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ?