ಬೆಂಗಳೂರು : ವಿಪಕ್ಷ ನಾಯಕರಾಗುವುದಕ್ಕೆ ಬಿಜೆಪಿಯವರೆಲ್ಲಾ ಅಸಮರ್ಥರಾ? ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕರಾಗುವುದಕ್ಕೆ ಬಿಜೆಪಿಯವರೆಲ್ಲಾ ಅಸಮರ್ಥರಾ? ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಸುನೀಲ್ ಕುಮಾರ್, ಯತ್ನಾಳ್ ಇವರೆಲ್ಲರೂ ಅಸಮರ್ಥರಾ? ಇವರಿಗೆ ವಿರೋಧ ಪಕ್ಷದ ನಾಯಕನಾಗುವ ಸಾಮರ್ಥ್ಯ ಇಲ್ವಾ? ಈಗ ಹೆಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಅಂತ ಬಿಂಬಿಸಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆದರೆ ನಾವು ಬೆಂಬಲ ಕೊಡುತ್ತೇವೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ಸುಮ್ಮನೇ ನಾಟಕೀಯ ಹೇಳಿಕೆ ಇದು. ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಯಾರೂ ಗೊಂದಲ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ನಮ್ಮ ಹೈಕಮಾಂಡ್ ಸಂಪರ್ಕದಲ್ಲಿ 60 ಶಾಸಕರು ಇದಾರೆ ಎಂದು ಮಾಜಿ ಸಚಿವ ಮುರಗೇಶ್ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಮ್ಮಲ್ಲಿ ಐದು ಶಾಸಕರೂ ಅವರ ಕಡೆ ಹೋಗೋದಿಲ್ಲ. ಮುರುಗೇಶ್ ನಿರಾಣಿಯವರು ಸೋತು ಸುಣ್ಣವಾಗಿದ್ದಾರೆ, ಅವರೀಗ ಶಾಸಕರೂ ಅಲ್ಲ. ಅವರಿಂದಲೇ ನಮ್ಮ ಕಡೆ ೨೦-೨೫ ಶಾಸಕರು ಬರ್ತಾರೆ. ೬೫-೭೦ ಶಾಸಕರು ಖರೀದಿ ಮಾಡಲು ಸುಲಭ ಇದೆಯಾ..? ಬಿಜೆಪಿ ನಮ್ಮ ಒಂದು ಎಂಎಲ್ಎ ಟಚ್ ಮಾಡಿದರೆ ಅವರಿಂದ ೨೫ ಎಂಎಲ್ಎಗಳು ನಮ್ಮ ಕಡೆ ಬರ್ತಾರೆ. ನಮ್ಮ ಶಾಸಕರ ಸಂಖ್ಯೆ ಹೆಚ್ಚಾಗಲಿದೆ. ನಾವು ೧೫೦-೧೬೦ ಕ್ಕೂ ಹೆಚ್ಚು ಶಾಸಕರಾಗಲಿದ್ದೇವೆ ಎಂದು ಮುರಗೇಶ್ ನಿರಾಣಿಗೆ ತಿರಗೇಟು ನೀಡಿದರು.