ಬೆಂಗಳೂರು : ಇತ್ತೀಚಿಗೆ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯದ್ದೇ ಚರ್ಚೆಯಾಗ್ತಾಯಿದೆ. ಜೀವ ಉಳಿಸಬೇಕಾದ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಅಧೋಗತಿಯಾಗಿದೆ. ಜಿರಳೆ ಪ್ರಕರಣದಲ್ಲಿ ಫೇಮಸ್ ಆಗಿದ್ದ ಆಸ್ಪತ್ರೆ ಮತ್ತೆ ಸುದ್ದಿಯಾಗ್ತಾಯಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..
ಎಸ್… ಇತ್ತೀಚಿಗೆ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಸುದ್ದಿಯಾಗ್ತಾಯಿದೆ. ಡಿಸೆಂಬರ್ ಮೊದಲ ವಾರ ಜಿರಲೆ ಪ್ರಕರಣದಿಂದ ಸುದ್ದಿಯಾಗಿದ್ದ ವಾಣಿವಿಲಾಸ ಆಸ್ಪತ್ರೆ ಮತ್ತೆ ಚರ್ಚೆಯಲ್ಲಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ವೇಸ್ಟ್ ಕೊಳೆತು ನಾರುತ್ತಿದೆ.
ಸಿಲಿಕಾನ್ ಸಿಟಿಯ ವಾಣಿವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯದ ಜತೆಗೆ ಬೇರೆ ಬೇರೆ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ಬಿಸಾಡಲಾಗಿದೆ. ಪ್ಲಾಸ್ಟಿಕ್ ಕವರ್ಗಳು ಒಡೆದು ತ್ಯಾಜ್ಯ ಹೊರಬಂದಿವೆ. ತ್ಯಾಜ್ಯ ಕೊಳೆತು ಗಬ್ಬೆದ್ದು ನಾರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ. ಸಾರ್ವಜನಿಕರು, ರೋಗಿಗಳ ಶುದ್ಧ ಕುಡಿಯುವ ನೀರಿನ ಘಟಕದ ಬಳಿಯೇ ಯಾವುದೇ ಸುರಕ್ಷತೆ ಇಲ್ಲದೆ ವೈದ್ಯಕೀಯ ತ್ಯಾಜ್ಯ ಸುರಿಯಲಾಗಿದೆ. ತ್ಯಾಜ್ಯದ ಪಕ್ಕದಲ್ಲಿಯೇ ಆಸ್ಪತ್ರೆಗೆ ಕಾರ್ಮಿಕರು ಮಾಸ್ಕ್, ಶೂ, ಗೌನ್ ಹಾಕದೇ ಹಾಗೆಯೇ ಕೆಲಸ ಮಾಡ್ತಾರೆ.
ರೋಗಿಗಳ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಯಲ್ಲೇ ಸ್ವಚ್ಛತೆ ಇಲ್ಲದೇ ಹಲವು ರೋಗಗಳಿಗೆ ಎಡೆಮಾಡಿ ಕೊಡುತ್ತಿದೆ. ಇನ್ನು ಆಸ್ಪತ್ರೆ ಅಕ್ಕಪಕ್ಕ ಓಡಾಡುವ ಜನರಿಗೆ ಆಸ್ಪತ್ರೆಯ ಎದುರು ಕಸ ಕಂಡು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆ ಆವರಣದ ಸುತ್ತಲೂ ಗಿಡದ ರೆಂಬೆ ಕೊಂಬೆಗಳು ಬಿದ್ದಿದ್ದು ಅದನ್ನು ತೆರವು ಮಾಡುವ ಕೆಲಸವು ಆಗುತ್ತಿಲ್ಲ. ಆಸ್ಪತ್ರೆಯ ಸ್ವಚ್ಛತೆಗಾಗಿ ಪ್ರತಿ ತಿಂಗಳು ಸರಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಆದ್ರೆ ಆಸ್ಪತ್ರೆಯ ಆವರಣದಲ್ಲೇ ಇಷ್ಟೊಂದು ಗಲೀಜು ಇರೋದಕ್ಕೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಒಟ್ಟಿನಲ್ಲಿ ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಯ ಸ್ಥಿತಿ ಹೀಗಿರುವಾಗ ಇನ್ನಾದ್ರೂ ಸರ್ಕಾರ ಆಸ್ಪತ್ರೆಯತ್ತ ಗಮನಹರಿಸಿ ಸರಿಯಾದ ನಿರ್ವಹಣೆ ಮಾಡಿ ಬಡ ಜನರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕಿದೆ.
ವರದಿ : ಹರ್ಷಿತಾ ಪಾಟೀಲ್