ಬೆಂಗಳೂರು : ರಾಜ್ಯದಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿಅನ್ಶನಭಾಗ್ಯ, ಶಕ್ತಿ ಯೋಜನೆ ಐದು ಗ್ಯಾರಂಟಿ ಜಾರಿಗೆ ಮುಂದಾಗಿರೋ ಕರ್ನಾಟಕ ಸರ್ಕಾರ ಇರೋ ಬರೋ ಅನುದಾನವನ್ನೆಲ್ಲ ತಮ್ಮ ಆಶ್ವಾಸನೆ ಈಡೇರಿಸೋಕೆ ಬಳಸಿಕೊಳ್ತಿದೆ. ಹೀಗಾಗಿ ರಾಜ್ಯದಲ್ಲಿ ಯಾವ ಕಾಮಗಾರಿ, ಯೋಜನೆಗಳಿಗೂ ಹಣವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಈ ಮಧ್ಯೆ ರಾಜ್ಯ ರಾಜಧಾನಿಯ ಪೌರ ಕಾರ್ಮಿಕರ ಅನುದಾನವನ್ನು ಹಿಂಪಡೆದ ಸರ್ಕಾರ ಈಗ ಪೌರಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿನಿತ್ಯ ಬೆಂಗಳೂರಿನ ಸ್ವಚ್ಛತೆ,ನೈರ್ಮಲ್ಯ ಹಾಗೂ ಸೌಂದರ್ಯ ಕಾಪಾಡಲು ಸಾವಿರಾರು ಪೌರಕಾರ್ಮಿಕರು ಶ್ರಮಿಸುತ್ತಾರೆ. ಇಂತಹ ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡೋಕೆ ಅಂತ ಬಿಬಿಎಂಪಿ ಒಂದಿಷ್ಟು ಕೋಟಿ ಅನುದಾನ ವೆಚ್ಚ ಮಾಡುತ್ತೆ.
ಪ್ರತಿವರ್ಷ ಬಿಬಿಎಂಪಿ(BBMP) ಪೌರ ಕಾರ್ಮಿಕರಿಗೆ ಸಮವಸ್ತ್ರ,ವೃತ್ತಿ ಉಪಕರಣಗಳು ಹಾಗೂ ಇತರೆ ವೆಚ್ಚ ಕ್ಕಾಗಿ 15 ಕೋಟಿ ರೂಪಾಯಿ ಮೀಸಲಿರಿಸುತ್ತದೆ. ಈ ಅನುದಾನದಲ್ಲಿ ಸಾವಿರಾರು ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ. ಅಲ್ಲದೇ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿಗೂ ಇದೇ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಆದರೆ ಈಗ ಬಿಬಿಎಂಪಿ(BBMP) ಅನುದಾನದ ಈ ಹಣವನ್ನು ಸರ್ಕಾರ ವಾಪಸ್ ಪಡೆದಿದೆ. ಸರ್ಕಾರದ ಈ ನಡೆಗೆ ಬೆಂಗಳೂರು ಪೌರ ಕಾರ್ಮಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಬಿಬಿಎಂಪಿ(BBMP) ಪೌರ ಕಾರ್ಮಿಕರ ಸಂಘ ಸಿಎಂಗೆ ಸುಧೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹಾಗೂ ನೋವು ತೋಡಿಕೊಂಡಿದೆ.
ಈಗಾಗಲೇ ಹಲವು ವರ್ಷಗಳಿಂದ ಖಾಯಂ ನೇಮಕಾತಿಗಾಗಿ ಪೌರ ಕಾರ್ಮಿಕರು ಹೋರಾಡುತ್ತಿದ್ದಾರೆ. ಪೌರ ಕಾರ್ಮಿಕರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬಿಬಿಎಂಪಿ ಮೀಸಲಿರಿಸುವ ಹಣವನ್ನು ವಾಪಸ್ ಪಡೆದಿರೋದು ಸರ್ಕಾರ ಪೌರ ಕಾರ್ಮಿಕರಿಗೆ ಮಾಡಿರುವ ಅವಮಾನ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಬಿಬಿಎಂಪಿ ಮೀಸಲಿರಿಸಿದ 15 ಕೋಟಿ ಅನುದಾನದಲ್ಲಿ ಒಟ್ಟು 18500 ಪೌರ ಕಾರ್ಮಿಕರಿಗೆ ಸೌಲಭ್ಯ ಒದಗಿಸಲಾಗುತ್ತಿತ್ತು. ಈ ವರ್ಷ ಸಮವಸ್ತ್ರದ ಜೊತೆ ಪೌರ ಕಾರ್ಮಿಕರ ಕಷ್ಟಕ್ಕೂ ಸಹಾಯ ಸಿಗದ ಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಅನುದಾನಕ್ಕೆ ಹಣ ಒದಗಿಸುವ ಭರದಲ್ಲಿ ಪೌರ ಕಾರ್ಮಿಕರ ಅನುದಾನ ಕಿತ್ತುಕೊಂಡಿದೆ ಎಂದು ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಅನುದಾನ ಹಿಂಪಡೆದಿರೋದರಿಂದ ಪೌರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅನುದಾನದ ಹಠಾತ್ ರದ್ದಿನಿಂದ ಪೌರ ಕಾರ್ಮಿಕರ ಸುರಕ್ಷತೆ ಹಾಗೂ ಆರೋಗ್ಯಕ್ಕೆ ಧಕ್ಕೆ ತರೋದಲ್ಲದೇ ಅವರ ಜೀವನೋಪಾಯ,ಘನತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ.
ಅಲ್ಲದೇ ಅನುದಾನದ ರದ್ಧತಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯ ಬಗ್ಗೆ ನಕಾರಾತ್ಮಕ ಸಂದೇಶವನ್ನು ನೀಡಿದೆ ಎಂದು ನಮ್ಮ ಸಂಘಟನೆ ನಂಬುತ್ತದೆ ಎಂದು ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಪತ್ರದಲ್ಲಿ ಬರೆದಿದೆ. ಇನ್ನು ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ಕೂಡ ಸರ್ಕಾರಕ್ಕೆ ಚಾಟಿ ಬೀಸಿದ್ದು, ಪೌರ ಕಾರ್ಮಿಕರ ಅನುದಾನಕ್ಕೂ ಕತ್ತರಿ ಹಾಕುವಂತ ಕೆಟ್ಟ ಸ್ಥಿತಿ ನಿಮಗೆ ಬಂದಿದ್ಯಾ ಎಂದು ಸರ್ಕಾರವನ್ನು ಟೀಕಿಸಿದೆ.