ಬೆಂಗಳೂರು : ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Home Minister Dr G Parameshwara) ಹೇಳಿದ್ದಾರೆ.
ಮಾಧ್ಯ,ಮದೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಈ ಹಿಂದೆ ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರೂ ಸರ್ಕಾರ ನಡೆಸಿದ್ದಾರೆ. ಅವರಿಗೆ ಕಾನೂನು ಪ್ರಕ್ರಿಯೆಗಳು ಗೊತ್ತಿರುತ್ತದೆ. ಈಗ ನಡೆಯುತ್ತಿರುವುದು ಹಳೇ ಕೇಸ್ಗಳ ಕ್ಲಿಯರಿಂಗ್ ಆಗಿದೆ.
ಇದೊಂದೇ ಕೇಸ್ ಎಂದು ನಾವು ನಿರ್ದಿಷ್ಟವಾಗಿ ಪರಿಗಣಿಸಿಲ್ಲ . ಎಲ್ಲ ಕೇಸ್ಗಳನ್ನೂ ಪರಾಮರ್ಶೆ ಮಾಡುವಾಗ ಇದೂ ಆಗಿದೆ. ಸುಮ್ಮನೆ ಇದರಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಮಾಡುವ ಉದ್ದೇಶದಿಂದ ಟೀಕೆ ಮಾಡಬಾರದು. ಈ ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ. ಇದು ಬಿಟ್ಟು ಬೇರೆ ಕೇಸ್ಗಳಲ್ಲಿ ಬಂಧನ ಆದವರು ಹಿಂದುಗಳಲ್ವಾ? ಅವರಿಗೊಂದು ನ್ಯಾಯ? ಇವರಿಗೊಂದು ನ್ಯಾಯವಾ? ಕಾನೂನು ಪ್ರಕಾರ ಏನು ಆಗುತ್ತದೆಯೋ ಅದು ಆಗುತ್ತದೆ.
ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ಅನ್ನು ರಿವ್ಯೂ ಮಾಡುತ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೀಗಾಗುತ್ತಿರುವುದು ಕಾಕತಾಳೀಯ ಅಷ್ಟೇ. ನಮಗೆ ಹೇಳಿ, ಕಮಿಷನರ್ ಗಮನಕ್ಕೆ ತಂದು ಇವರನ್ನು ಅರೆಸ್ಟ್ ಮಾಡಿಲ್ಲ. ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ಲವೇ? ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದರು.