ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಖಾಸಗಿ ವಾಹಿನಿಯಲ್ಲಿ ಹೂಡಿಕೆ ಬಗ್ಗೆ ಸಿಬಿಐ ನನಗೆ ನೋಟಿಸ್ ಕೊಟ್ಟಿಲ್ಲ. ಯಾವ ಆಧಾರದ ಮೇಲೆ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಕಿರುಕುಳ ಕೊಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ
ಡಿಸಿಎಂ ಡಿಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾನೆಲ್ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೋರಿ ಜೈ ಹಿಂದ್ ಮಾಧ್ಯಮಕ್ಕೆ ಸಿಬಿಐ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿಬಿಐ ನನಗೆ ನೋಟಿಸ್ ಕೊಟ್ಟಿಲ್ಲ. ಯಾವ ಆಧಾರದ ಮೇಲೆ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಕಿರುಕುಳ ಕೊಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರಿಂದ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಲಿ, ನಾನು ಹೆದರಲ್ಲ. ನನ್ನ ಜೈಲಿಗೆ ಹಾಕುವ ಉದ್ದೇಶ ಇದ್ದರೆ ಹಾಕಲಿ. ಅವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಜೈ ಹಿಂದ್ ಅಷ್ಟೇ ಅಲ್ಲದೆ, ಹಾಪ್ ಕಾಮ್ಸ್, ಸಬ್ ರಿಜಿಸ್ಟಾರ್ಗಳಿಗೂ ಕೊಟ್ಟಿದ್ದಾರೆ. ಸರ್ಕಾರ ಸಿಬಿಐಗೆ ಕೊಟ್ಟ ಅನುಮತಿ ಹಿಂಪಡೆದಿದೆ. ಆದರೂ ಕೂಡ ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ. ಎಲ್ಲಾ ದಾಖಲೆಗಳು ಅವರ ಬಳಿ ಇವೆ. ಈ ಕೇಸ್ನಲ್ಲಿ ಸರ್ಕಾರ ಅನುಮತಿ ಹಿಂಪಡೆದಿದೆ. ನಾನೇನು ಲಾಯರ್ ಅಲ್ಲ, ನನಗಿರುವ ಕಾನೂನಿನ ಅರಿವಿನಲ್ಲಿ ದಾಖಲೆಗಳನ್ನ ಲೋಕಾಯುಕ್ತಕ್ಕೆ ಕೊಡಬೇಕು ಎಂದಿದ್ದಾರೆ.
ಈಗ ಕಿರುಕುಳ ನೀಡುವುದಕ್ಕೆ ಅಲ್ಲಿ ದೊಡ್ಡ ದೊಡ್ಡ ಜನ ಇದ್ದಾರೆ. ಅದೆಲ್ಲಾ ನನಗೆ ಗೊತ್ತಿದೆ ಅವರು ಏನೂ ಬೇಕಾದರೂ ಮಾಡಲಿ, ನನ್ನ ರಾಜಕೀಯವಾಗಿ ಮುಗಿಸಬೇಕು ತೊಂದರೆ ಮಾಡಬೇಕು ಎನ್ನುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೆಲ ಬಿಜೆಪಿ ನಾಯಕರು ಹಿಂದೆನೇ ಹೇಳಿದ್ದರು. ನನ್ನ ಜೈಲಿಗೆ ಕಳುಸುತ್ತೇವೆ ಅಂತ ಭವಿಷ್ಯ ನುಡಿದಿದ್ದರು. ನಾನು ಅವರನ್ನ ಕರೆದಿದ್ದೆ ಚರ್ಚೆ ಮಾಡೋಣ ಬನ್ನಿ ಅಂತ. ದೊಡ್ಡ ಯೋಜನೆ ನಡೀತಾ ಇದೆ. ನಾನೇನು ತಪ್ಪು ಮಾಡಿಲ್ಲ. ಅವರು ಏನು ಬೇಕಾದರೂ ತನಿಖೆ ಮಾಡಲಿ. ಎಲ್ಲಿ ನನಗೆ ನ್ಯಾಯ ಸಿಗಬೇಕು ಅಲ್ಲಿ ಸಿಗುತ್ತದೆ ಎಂದು ಹೇಳಿದ್ದಾರೆ.