ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ (H.Vishwanath) ಸ್ವಪಕ್ಷೀಯರ ವಿರುದ್ಧ ಮಾತಿನ ಸುರಿಮಳೆಗೈದಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Yediyurappa) ಪುತ್ರ ಬಿವೈ ವಿಜಯೇಂದ್ರ (Vijayendra) ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ನನಗೆ ಆಮಿಷ ಒಡ್ಡಿದ್ದರು ಎಂದು ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲರೂ ನನಗೆ ದುಡ್ಡು ಕೊಡೋಕೆ ಬಂದಿದ್ದರು. ಈ ಬಗ್ಗೆ ಬಾಂಬೆ ಡೈರೀಸ್ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದೇನೆ. ಪುಸ್ತಕದ ಮೊದಲ ಅಧ್ಯಾಯದಲ್ಲೇ ಇದೆ ಎಂದು ತಿಳಿಸಿದ್ರು.
ನಾನು ಕಾಂಗ್ರೆಸ್ನ ಯಾವುದೇ ನಾಯಕರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರನ್ನು ಬಹಿರಂಗವಾಗಿಯೇ ಭೇಟಿ ಮಾಡಿದ್ದೇನೆ. ನಾನು ಎಂದಾದರೂ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರುತ್ತೇನೆ ಎಂದು ಹೇಳಿದ್ದೀನಾ? ಎಂದು ಪ್ರಶ್ನಿಸಿದ್ರು. ಇದನ್ನು ಓದಿ : – RV ದೇಶಪಾಂಡೆಗೆ ವಯಸ್ಸಾಯ್ತು…! ಡಿಕೆ ಶಿವಕುಮಾರ್ ಎದುರು ಮುಜುಗರಕ್ಕೀಡಾದ ಹಿರಿಯ ನಾಯಕ!
ನಾನು ಬಿಜೆಪಿ ಸೇರಲು ಮಧ್ಯಸ್ಥಿಕೆ ವಹಿಸಿದವರು ಇದೇ ಶ್ರೀನಿವಾಸ್ ಪ್ರಸಾದ್ (Srinivas prasad) ಎಂದು ಗುಡುಗಿದ್ರು. ಆದರೆ, ನಾನು ಬಿಜೆಪಿ ಸೇರ್ಪಡೆಯಾದ ಬಳಿಕ ಬಿಎಸ್ ಯಡಿಯೂರಪ್ಪ ಆಗಲಿ, ಶ್ರೀನಿವಾಸ್ ಪ್ರಸಾದ್ ಸೇರಿ ಯಾವ ಬಿಜೆಪಿ ನಾಯಕರು ನನ್ನ ನೆರವಿಗೆ ಬರಲಿಲ್ಲ. ಹುಣಸೂರು ಉಪ ಚುನಾವಣೆಯಲ್ಲಿ ಸೋತ ಬಳಿಕ ಯಾರೂ ಬರಲಿಲ್ಲ. ನನ್ನ ವಿಧಾನ ಪರಿಷತ್ ಸದಸ್ಯ ಮಾಡಲು ನೆರವಾಗಿದ್ದು ಆರ್ಎಸ್ಎಸ್ ಮುಖಂಡ ಮುಕುಂದ ಅವರು. ಆರ್ಎಸ್ಎಸ್ ನಾಯಕ ಮುಕುಂದ ಅವರಿಂದ ನಾನು ವಿಧಾನ ಪರಿಷತ್ ಸದಸ್ಯ ಆದೆ ಎಂದು ಹೇಳಿದ್ರು. ನಾನು, ಶ್ರೀನಿವಾಸ್ ಪ್ರಸಾದ್ ಹಳೇ ಸ್ನೇಹಿತರು, ಬಹು ಕಾಲದ ಒಡನಾಡಿಗಳು.
ಅದೆಲ್ಲವನ್ನು ಮರೆತು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ನಾನು ಭೇಟಿ ಮಾಡಿದ್ದು ಘೋರ ಅಪರಾಧ ಎಂಬಂತೆ ಶ್ರೀನಿವಾಸ್ ಪ್ರಸಾದ್ ಬಿಂಬಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ಯಾರನ್ನು ಮೆಚ್ಚಿಸಲು ನನ್ನ ವಿರುದ್ದ ಮುಗಿಬಿದ್ದಿದ್ದೀರಿ. ಸಂಸತ್ ಸದಸ್ಯರಾಗಿರುವ ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಏಕಾಏಕಿ ನನ್ನ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸಿರುವ ನೀವು ಎಷ್ಟು ಪಕ್ಷಗಳನ್ನು ಬದಲಾಯಿಸಿದ್ದೀರಿ. ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್ ವಿರುದ್ದ ಟೀಕಾ ಪ್ರಹಾರ ನಡೆಸಿದ್ರು.
ಇದನ್ನು ಓದಿ : – ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್ ಪಾಟೀಲ್