2016 ರಲ್ಲಿ ಕೇಂದ್ರ ಸರ್ಕಾರ (Central government) ಜಾರಿಗೆ ತಂದಿದ್ದ ಅಧಿಕ ಮೌಲ್ಯದ ನೋಟು ಅಮಾನ್ಯೀಕರಣದ ಹಿಂದಿನ ನಿರ್ಧಾರದ ಪ್ರಕ್ರಿಯೆ ಮತ್ತು ಅದರ ಹಲವು ಆಯಾಮಗಳ ಕುರಿತಂತೆ ಸುಪ್ರೀಂ ಕೋರ್ಟ್ (Supreme court) ಮುಂದೆ ಅಫಿಡವಿಟ್ ಸಲ್ಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರದ ಪರ ಮನವಿ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವೈ, ಎ ಎಸ್ ಬೋಪಣ್ಣ, ವಿ ರಾಮಸುಬ್ರಹ್ಮಣ್ಯನ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತರಾಟೆಗೆ ತೆಗೆದುಕೊಂಡಿದೆ. ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸಾಮಾನ್ಯವಾಗಿ ಸಾಂವಿಧಾನಿಕ ಪೀಠ ಈ ರೀತಿ ವಿಚಾರಣೆ ಮುಂದೂಡುವುದಿಲ್ಲ. ಅರ್ಜಿ ವಿಚಾರಣೆ ಆರಂಭವಾದ ನಂತರ ಈ ರೀತಿ ನಾವು ಸಾಮಾನ್ಯವಾಗಿ ಮಾಡುವುದಿಲ್ಲ. ಆದರೆ ಇದು ನ್ಯಾಯಾಲಯಕ್ಕೆ ತುಂಬಾ ಮುಜುಗರದ ವಿಷಯ ಎಂದು ಹೇಳಿದ್ದಾರೆ. ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು RBI ಗೆ ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ. 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಹೊರಡಿಸಿದ್ದ ಅಧಿಸೂಚನೆಯ ಮೌಲ್ಯವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಅಂದು RBI ಕಾಯ್ದೆ 1934ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದ್ದು ಅದು ಸಂವಿಧಾನ ವಿಧಿ 300 ಎ ಮತ್ತು ಪರಿಚ್ಛೇದ 14,19 ಮತ್ತು 21ರ ಉಲ್ಲಂಘನೆಯಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ನೋಟು ಅಮಾನ್ಯೀಕರಣ ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದೆ ಮಂಡನೆಯಾಗಿವೆ.
ಇದನ್ನೂ ಓದಿ : – NEET – PG ಪರೀಕ್ಷೆ ರದ್ದು ಸಾಧ್ಯತೆ – ಮುಂದಿನ ವರ್ಷದಿಂದ MBBS ನಿರ್ಗಮನ ಪರೀಕ್ಷೆ