ಚಾಮರಾಜನಗರ (Chamrajnagar) ಜಿಲ್ಲೆಯ ಯಳಂದೂರು (Yalanduru) ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದೇ ಇರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರವನ್ನು ಗ್ರಾಮ ಪಂಚಾಯತಿಯ ಕಚೇರಿ ಅವರಣದಲ್ಲಿ ನೆರವೇರಿಸಿದ್ದಾರೆ.
ಮಾಂಬಳ್ಳಿ ಗ್ರಾಮದ ದಲಿತರ ಬಡಾವಣೆಯ ಚಂದ್ರಮ್ಮ ಕಳೆದ ರಾತ್ರಿ ನಿಧನರಾಗಿದ್ದು ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸುವರ್ಣವತಿ ನದಿಯನ್ನು ದಾಟಿ ಹೋಗಬೇಕು. ಆದರೆ ಸುವರ್ಣವತಿ ಜಲಾಶಯದ ಹರಿವು ಹೆಚ್ಚಾಗಿ ನದಿ ಉಕ್ಕಿ ಹರಿಯುತ್ತಿದ್ದು ಸೇತುವೆ ಇಲ್ಲದೆ ಸ್ಮಶಾನಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಇತ್ತ ಪ್ರವಾಹದಿಂದ ನದಿ ದಡದಲ್ಲೂ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಸ್ಥರು ಮಹಿಳೆಯ ಅಂತ್ಯಕ್ರಿಯೆಯನ್ನು ಗ್ರಾಮ ಪಂಚಾಯತಿ ಕಚೇರಿಯ ಅವರಣದಲ್ಲಿ ಗುಂಡಿ ತೆಗೆದು ನೆರವೇರಿಸಲು ಮುಂದಾಗುತ್ತಿದ್ದಂತೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : – ಎಸ್ಟಿ ಮೀಸಲಾತಿ ವಿಚಾರ – ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಶಾಸಕ ಗಣೇಶ್ ನಡುವೆ ಮಾತಿನ ಸಮರ
ಅಂತ್ಯಕ್ರಿಯ ಮಾಡದಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅಂತ್ಯಕ್ರಿಯೆ ಬೇರೆ ಸ್ಥಳದಲ್ಲಿ ಮಾಡುವಂತೆ ಗ್ರಾಮಸ್ಥರಿಗೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ಪಟ್ಟು ಬಿಡದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತಿಯ ಕಚೇರಿ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ, ಪೆಟ್ರೋಲಿಯಂ ಯೋಜನೆಗಳಿಗೆ ಶಂಕುಸ್ಥಾಪನೆ