ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಗೆ ಸೇರಿಸಿ : ಸಿದ್ದರಾಮಯ್ಯ

ಬೆಂಗಳೂರು: ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಸರ್ಕಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಬ್ಲ್ಯಾಕ್ ಫಂಗಸ್, ಕಪ್ಪು ಶಿಲೀಂದ್ರದ ಸಮಸ್ಯೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ಕಾಯಿಲೆಯು ಕೋವಿಡ್ ರೋಗಕ್ಕೆ ತುತ್ತಾಗಿ  ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಕೋವಿಡ್ ನಿಂದಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದವರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿರುವ ಈ ಕಾಯಿಲೆಯನ್ನು ಬಡವರಿರಲಿ, ಮಧ್ಯಮ ವರ್ಗದವರಿಗೂ ಕೂಡ ಸೂಕ್ತ ಚಿಕಿತ್ಸೆ ಪಡೆಯಲಾಗದಷ್ಟು ದುಬಾರಿಯಾಗಿದೆ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ಈ ಔಷಧಗಳು ಸಿಗುತ್ತಿಲ್ಲ. ಒಂದೊಂದು ಇಂಜೆಕ್ಷನ್ನಿನ ಬೆಲೆ ಕಾಳಸಂತೆಯಲ್ಲಿ ಈಗಾಗಲೇ  5 ರಿಂದ 7 ಸಾವಿರ ರೂಗಳವರೆಗೆ ಮಾರಾಟವಾಗುತ್ತಿವೆ ಎಂಬ ದೂರುಗಳು ಬರುತ್ತಿವೆ. ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಅರಾಜಕವಾಗಿ ನಿರ್ವಹಿಸುತ್ತಿರುವ, ಸತ್ತವರು ಸಾಯಲಿ ಎಂಬಂತೆ ನಡದುಕೊಳ್ಳುತ್ತಿರುವ ಸರ್ಕಾರ ಬ್ಲ್ಯಾಕ್ ಫಂಗಸ್ ರೋಗದ ಕುರಿತು ಇನ್ನೂ ಕೂಡ ಸಮರ್ಪಕ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ಚಿಕಿತ್ಸೆ ನೀಡುವ ಕುರಿತಾದಂತೆ ಅಷ್ಟೆ ಅಲ್ಲ. ರೋಗ ಹರಡುತ್ತಿರುವ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ. ರೋಗ ಯಾರಲ್ಲಿ ಹರಡುತ್ತಿದೆ? ಏಕೆ ಹರಡುತ್ತಿದೆ? ಯಾವಾಗ ಹರಡುತ್ತಿದೆ? ರೋಗ ಲಕ್ಷಣಗಳೇನು? ರೋಗ ಬಂದರೆ ಹೇಗೆ ಚಿಕಿತ್ಸೆ ಪಡೆಯಬೇಕು? ರೋಗ ಬರದಂತೆ ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು? ಕೋವಿಡ್ ಚಿಕಿತ್ಸೆಯಿಂದ ಈ ಶಿಲೀಂದ್ರ ಸೋಂಕು ಬರುತ್ತದೆ ಅಂತಾದರೆ, ಕೋವಿಡ್ ಚಿಕಿತ್ಸೆಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಟುಗಳೇನು? ಎಂಬೆಲ್ಲ ವಿಚಾರಗಳ ಕುರಿತು ಸಮರ್ಪಕ ಎಸ್‍ಓಪಿ ಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೋವಿಡ್ ಸೋಂಕಿನ ವಿಚಾರದಲ್ಲಿ ಅವೈಜ್ಞಾನಿಕವಾಗಿ ನಡೆದುಕೊಂಡಂತೆ ಬ್ಲ್ಯಾಕ್ ಫಂಗಸ್ಸಿನ ವಿಚಾರದಲ್ಲಿ ನಡೆದುಕೊಳ್ಳಬಾರದು. ಉತ್ತರ ಭಾರತದ ಅನೇಕ ಕಡೆ ಸಗಣಿ ಬಳಸಿ ಚಿಕಿತ್ಸೆ ಪಡೆಯಲು ಹೊರಟವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ವೈದ್ಯರು  ಕೋವಿಡ್ ಚಿಕಿತ್ಸೆಯಲ್ಲಿ ಅನಿಯಮಿತವಾಗಿ ಬಳಸುವ ಸ್ಟಿರಾಯ್ಡ್‍ಗಳಿಂದ ಹರಡುತ್ತಿದೆ ಎನ್ನುತ್ತಾರೆ. ಕೋವಿಡ್ ಬಂದವರಿಗೆ ಸಕ್ಕರೆ ಕಾಯಿಲೆ ಇದ್ದರೆ ಅವರಿಗೆ ಸುಲಭವಾಗಿ ಹರಡುತ್ತದೆ ಎನ್ನಲಾಗುತ್ತಿದೆ. ಆಕ್ಸಿಜನ್ ನೀಡುವಾಗ ಉಂಟಾಗುವ ಸೋಂಕುಗಳಿಂದ ಹರಡುತ್ತದೆ ಎಂಬ ಅಭಿಪ್ರಾಯವೂ ಇದೆ. ಆದ್ದರಿಂದ ಈ ಕುರಿತು ಸೂಕ್ತವಾಗಿ ಶೀಘ್ರವಾಗಿ ಅಧ್ಯಯನ ಮಾಡಿ ಚಿಕಿತ್ಸೆ ನೀಡಬೇಕು. ಪ್ರತಿವಾರ ಸುಮಾರು 400 ಜನಕ್ಕೆ ಈ ಸೋಂಕು ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಚಿಕಿತ್ಸೆ ನೀಡಲು ಬೇಕಾದ ತಯಾರಿಯನ್ನು ಇನ್ನೂ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದರು.

ಈಗಾಗಾಲೇ ಬಹಳಷ್ಟು ಜನರು ಬ್ಲಾಕ್ ಫಂಗಸ್ಸಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ, ಅಂಥವರ ಕುಟುಂಬ ಸೂಕ್ತ ಪರಿಹಾರ ನೀಡಬೇಕು. ಈ ರೋಗವು ಇನ್ನಷ್ಟು ಅಮೂಲ್ಯ ಜೀವಗಳನ್ನು ಹೊತ್ತೊಯ್ಯುವ ಮೊದಲು ಕೂಡಲೇ ಉಚಿತ ಚಿಕಿತ್ಸೆ ನೀಡಲು  ಆರಂಭಿಸಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!