ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಜನಪರ ಹೋರಾಟಗಳ ಮೂಲಕ ನಾಡಿನ ಪ್ರಮುಖ ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದ ಶತಾಯುಷಿ ಎಚ್.ಎಸ್. ದೊರೆಸ್ವಾಮಿ, ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಹಿಂದೆ ಗುಣಮುಖಿತರಾಗಿ ಮನೆಗೆ ಮರಳಿದ್ದರೂ ಸುಸ್ತು ಕಾಡಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಗೆ ದಾಖಲಿಸುವಾಗಲೆಲ್ಲಾ, ನನಗೆ ಬೆಡ್ ಬೇಡ. ನನಗೆ ಮನೆಯಲ್ಲೇ ಚಿಕಿತ್ಸೆ ಕೊಡಿ. ಅಗತ್ಯ ಇರುವ ಬೇರೆ ಯಾರಿಗಾದರೂ ಬೆಡ್ ಕೊಡಿ ಎಂದು ಮನವಿ ಮಾಡಿದ್ದರು ಎಂದು ಜಯದೇವ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಕೆ. ಮಂಜುನಾಥ್ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗುವಂತೆ ಅವರಿಗೆ ಹೇಳಿದಾಗ ನನಗೆ 100 ವರ್ಷ ಆಗಿದೆ. ನನಗೆ ಯಾಕೆ ಬೆಡ್? ಬೇರೆ ಯಾರಿಗಾದರೂ ಕೊಡಿ. ನಾನು ಬಾಳಿ ಬದುಕಿದ್ದು ಆಗಿದೆ ಎಂದು ಹೇಳುತ್ತಿದ್ದರು. ಆದರೆ ನಾವು ನಿಮಗೆ ಯಾವಾಗಲೂ ಬೆಡ್ ಇರುತ್ತದೆ. ಆದ್ದರಿಂದ ಇಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ಒತ್ತಾಯ ಮಾಡಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದೆವು ಎಂದು ಅವರು ವಿವರಿಸಿದರು.
ಆಸ್ಪತ್ರೆಯಲ್ಲಿ ಇದ್ದ ಅಷ್ಟೂ ದಿನ ವೈದ್ಯರು ಹೇಳಿದ್ದನ್ನು ಪಾಲಿಸುತ್ತಿದ್ದರು. ಎಲ್ಲರ ಜೊತೆ ಹೊಂದಿಕೊಂಡಿದ್ದರು ಎಂದು ಮಂಜುನಾಥ್ ವಿವರಿಸಿದರು.
ದೊರೆಸ್ವಾಮಿ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್.ಮಿಲ್ ನಲ್ಲಿ ಸಂಜೆ ಕೋವಿಡ್ ನಿಯಮದಂತೆ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ.