ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್( Syed Ashraf ) ಇಂದು ಬೆಳಗ್ಗೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 42ರ ವಯಸ್ಸಿನ ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
ಅದರಲ್ಲೂ ಕನ್ನಡ ಕಿರುತೆರೆ ಜಗತ್ತಿಗೆ ಭಕ್ತಿ ಪ್ರಧಾನ ಮತ್ತು ಫ್ಯಾಂಟಿಸಿ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು. ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಇವರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಧಾರಾವಾಹಿಗಳಿಗೆ ಇವರದ್ದೇ ನಿರ್ದೇಶನವಿದೆ. ಇದನ್ನೂ ಓದಿ : – ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆ
ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ದುಡಿದಿದ್ದಾರೆ. ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : – ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂ ಗೆ ಹಾರಿ ಮಹಿಳೆ ಆತ್ಮಹತ್ಯೆ…!