ಪಿಎಫ್ಐ (PFI) ಮೇಲೆ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್ ಗೆ ಈಗಲೂ ಒಳಗೊಳಗೆ ಪ್ರೀತಿ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahalad joshi) ವಾಗ್ದಾಳಿ ನಡೆಸಿದ್ದಾರೆ. ಪಿಎಫ್ಐ ಬ್ಯಾನ್ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ಬಿಜೆಪಿ ಯಾವತ್ತು ಮತ ಬ್ಯಾಂಕ್ ರಾಜಕಾರಣ ಮಾಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿರುವುದನ್ನು ಕಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ. ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳು, ದೇಶ ದ್ರೋಹ ಕೃತ್ಯಗಳ ಬಗ್ಗೆ ಜನರಿಗೆ ಮಾಹಿತಿ ಇದೆ. ಇಂಥಹ ಸಂದರ್ಭದಲ್ಲಿ ಪಿಎಫ್ಐ ಬ್ಯಾನ್ ಮಾಡಿರುವುದನ್ನು ವಿರೋಧಿಸಿದರೆ ಜನ ಒದೆಯುತ್ತಾರೆ ಅಷ್ಟೇ. ಪಿಎಫ್ಐ ಪರ ಮಾತನಾಡಿದರೆ ಏಲ್ಲಿ ದೇಶದ ಜನರ ಕಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬುದು ಕಾಂಗ್ರೆಸ್ ಗೆ ಚಿಂತೆಯಾಗಿದೆ ಎಂದು ಹೇಳಿದ್ರು. ಪಿಎಫ್ಐ ಬ್ಯಾನ್ ಮಾಡಿರುವ ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಿಎಫ್ಐ ವಿರುದ್ಧ ದೇಶ ದ್ರೋಹದ ಕೃತ್ಯಗಳ ಸಾಕಷ್ಟು ಸಾಕ್ಷಿಗಳು ನಮ್ಮ ಬಳಿ ಇವೆ. ಹೀಗಾಗಿ ಏನಾದರು ಮಾಡಿ ಮುಸ್ಲಿಂ ಓಲೈಕೆ ಮಾಡಬೇಕು ಎಂಬ ಕಾರಣಕ್ಕೆ ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. RSS ಎಂದರೆ ನಾವೇ. ಈ ದೇಶದ ಪ್ರಧಾನಿ ನರೇಂದ್ರ ಮೋದಿ (Narendra modi) ಅವರೇ ಆರ್ಎಸ್ಎಸ್ನಿಂದ ಬಂದವರು. ಆರ್ಎಸ್ಎಸ್ ಅನ್ನು ಯಾವ ಆಧಾರದ ಮೇಲೆ ಹೇಗೆ ಬ್ಯಾನ್ ಮಾಡುತ್ತೀರಾ? ಈ ಹಿಂದೆ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆರ್ಎಸ್ಎಸ್ ಬ್ಯಾನ್ ಮಾಡಿತ್ತು. ಬ್ಯಾನ್ ಮಾಡಿ ಕಾಂಗ್ರೆಸ್ ಏನು ಸಾಧಿಸಿದೆ. ಆರ್ಎಸ್ಎಸ್ ವಿರುದ್ಧ ಒಂದೇ ಒಂದು ಸಾಕ್ಷಿಯನ್ನು ಪ್ರಸ್ತುತಪಡಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ರು. ಇದನ್ನೂ ಓದಿ : – ನಿಜವಾಗಲೂ ಅವರಿಗೆ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು – ಯತೀಂದ್ರ ಸಿದ್ದರಾಮಯ್ಯ
RSS ಒಂದು ರಾಷ್ಟ್ರೀಯವಾದಿ ಸಂಘಟನೆ. ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ. ಆದರೆ ಪಿಎಫ್ಐ ಸಂಘಟನೆ ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರೇರೆಪಿಸುತ್ತಿರುವ ಕುರಿತು ಹಲವು ಸಾಕ್ಷ್ಯಗಳು ದೊರೆತಿವೆ. ದೇಶದಾದ್ಯಂತ ಹಲವು ಹತ್ಯೆಗಳಲ್ಲಿ ಈ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ. ಎಲ್ಲ ಸಾಕ್ಷಿಗಳನ್ನು ಕಲೆಹಾಕಿಯೇ ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಇದು ರಾಷ್ಟ್ರೀಯ ಸುರಕ್ಷತೆಯ ವಿಚಾರ. ಇಂಥಹ ಸೂಕ್ಷ್ಮ ವಿಚಾರದಲ್ಲಿ ಬಿಜೆಪಿ ಯಾವತ್ತು ಮತಬ್ಯಾಂಕ್ ರಾಜಕಾರಣ ಮಾಡಿಲ್ಲ. ಎಸ್ಡಿಪಿಐ ಒಂದು ಪೊಲಿಟಿಕಲ್ ಪಾರ್ಟಿ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇದನ್ನೂ ಓದಿ : – ಶತಮಾನಗಳ ಕಾಲ ಹಿಂದೂಸ್ತಾನವನ್ನು ಅಳಿದ ಮೊಘಲರಿಂದಲೇ ಅದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದು ಸಾಧ್ಯವಾಗಲಿಲ್ಲ: ಹೆಚ್.ಡಿ.ಕೆ