ಜಿಂಕೆ (Deer) ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು (Mysuru) ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಹಾಡಿಯಲ್ಲಿ ನಡೆದಿದೆ. ಹೊಸಹಳ್ಳಿ ಹಾಡಿಯ ಕರಿಯಪ್ಪ ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಆರೋಪಿಯು ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪವಿತ್ತು.
ಇಬ್ಬರು ಆರೋಪಿಗಳಾದ ಬಸಪುರದ ಪ್ರಸಾದ್, ಮುನಿಯಪ್ಪ ಎಂಬ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಕರಿಯಪ್ಪನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕರಿಯಪ್ಪ ಸಾವನ್ನಪ್ಪಿದ್ದಾರೆ. ಹೃದಯಾಘಾತ (Heart attack) ದಿಂದ ಕರಿಯಪ್ಪ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಬಂದಿತ್ತು. ಇಲ್ಲ ಇದು ಕೊಲೆ , ವಿಚಾರಣೆ ನೆಪದಲ್ಲಿ ಗುಂಡ್ರೆ ಅರಣ್ಯ ವಲಯದ ಅರಣ್ಯ ಸಿಬ್ಬಂದಿ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿ ಕರಿಯಪ್ಪ ಪೋಷಕರು ಆರೋಪಿಸಿದ್ದರು. ಅರಣ್ಯ ಸಿಬ್ಬಂದಿ ವಶದಲ್ಲಿದ್ದ ಆದಿವಾಸಿ ಕರಿಯಪ್ಪ ಲಾಕಪ್ ಡೆತ್ ಆಗಿದೆ ಎಂಬ ಮಾಹಿತಿಯಿದ್ದು, ಹೃದಯಾಘಾತವಾಗಿದೆ ಎಂದು ಭಾವಿಸಿ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ ವೇಳೆ ಲಾಕ್ ಆಪ್ ಡೆತ್ ಎಂದು ವೈದ್ಯರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಕೆ ಆರ್ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ, ಆಸ್ಪತ್ರೆಗೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :- ಜನರ ಬಳಕೆಗೂ ಮುನ್ನ ಕೋವಿಡ್ ಲಸಿಕೆಯ ಪರೀಕ್ಷೆ ನಡೆಸದ ‘ಫೈಜರ್ ಸಂಸ್ಥೆ’- ನೀವೂ ಹಾಕಿಸಿಕೊಂಡ ಲಸಿಕೆ ಎಷ್ಟು ಸೇಫ್…?