ಅಯೋಧ್ಯೆ : ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾಪನೆ’ ಮಹೋತ್ಸವ ಜರುಗಲಿದೆ. ಈಗಾಗಲೇ ರಾಮಮಂದಿರದ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ವಿರಾಜಮಾನವಾಗಿದೆ. ಬಾಲರಾಮನ ಪೂರ್ಣ ಭಂಗಿಯ ವಿಗ್ರಹದ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ವಿಗ್ರಹದ ದಿವ್ಯ ದರ್ಶನವೇ ಆಗಿದೆ. ‘ಜೈ ಶ್ರೀರಾಮ್’ ಘೋಷಣೆ ಮೊಳಗುತ್ತಿದೆ.
ರಾಮಲಲ್ಲಾ ವಿಗ್ರಹದ ಫೋಟೋ ವೈರಲ್
ಶುಕ್ರವಾರ ಬೆಳಗ್ಗೆ ನಿಂತ ಭಂಗಿಯಲ್ಲಿರುವ ರಾಮಲಲ್ಲಾ ವಿಗ್ರಹದ ಮೊದಲ ಫೋಟೋವನ್ನು ಹಂಚಿಕೊಳ್ಳಲಾಯಿತು. ವಿಗ್ರಹವನ್ನು ಬಿಳಿವಸ್ತ್ರದಿಂದ ಮುಚ್ಚಲಾಗಿತ್ತು. ನಂತರ ಕಣ್ಣಿಗಷ್ಟೇ ಬಟ್ಟೆ ಕಟ್ಟಿರುವ ರಾಮಲಲ್ಲಾ ವಿಗ್ರಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಈಗ ಹಲವು ವಿಶೇಷತೆ ಹೊಂದಿರುವ ಪೂರ್ಣ ವಿಗ್ರಹದ ಚಿತ್ರಗಳು ವೈರಲ್ ಆಗುತ್ತಿವೆ.
ಫೇಸ್ಬುಕ್, ಎಕ್ಸ್ ಖಾತೆ, ವಾಟ್ಸಪ್ ಸ್ಟೇಟಸ್ನಲ್ಲಿ ಮಿಂಚು
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರಾಮಲಲ್ಲಾ ವಿಗ್ರಹದ ಫೋಟೋಗಳು ರಾರಾಜಿಸುತ್ತಿವೆ. ರಾಜಕೀಯ ನಾಯಕರು, ರಾಮಭಕ್ತರ ಫೇಸ್ಬುಕ್, ಎಕ್ಸ್ ಖಾತೆಗಳು ಹಾಗೂ ವಾಟ್ಸಪ್ ಸ್ಟೇಟಸ್ಗಳಲ್ಲೂ ಬಾಲರಾಮ ಮಿಂಚುತ್ತಿದ್ದಾನೆ. ಎಲ್ಲರೂ ‘ಜೈ ಶ್ರೀರಾಮ್’ ಘೋಷವಾಕ್ಯವನ್ನು ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ.
ದಶಕಗಳ ಕನಸು ಈಗ ನನಸಾಗಿದೆ. ಪ್ರಭು ರಾಮಲಲ್ಲಾ ಅವರ ಮೊದಲ ನೋಟ. ಜೈ ಶ್ರೀ ರಾಮ್ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ರಾಮಲಲ್ಲಾ ಫೋಟೋವನ್ನು ಹಂಚಿಕೊಂಡಿದ್ದಾರೆ.
ಶ್ರೀರಾಮ ಜಯ ರಾಮ ಜಯ ಜಯ ರಾಮ! ಲಕ್ಷಾಂತರ ಜನರ ಆಕಾಂಕ್ಷೆಗಳು, ಶತಮಾನಗಳ ಹಂಬಲ, ಅಂತಿಮವಾಗಿ ಪ್ರಭು ರಾಮಲಲ್ಲಾ ಅವರ ದಿವ್ಯ ದರ್ಶನ! ಜೈ ಶ್ರೀ ರಾಮ್ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅವರು ಎಕ್ಸ್ ಖಾತೆ ಬರೆದುಕೊಂಡಿದ್ದಾರೆ.
https://www.instagram.com/p/C2R-XoeLCzY/?utm_source=ig_web_copy_link
ನಾವು 500 ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮುಂದಿನ 50 ಗಂಟೆಗಳು 500 ವರ್ಷಗಳಂತೆ ಗೋಚರವಾಗುತ್ತಿದೆ. ಈ ಧಾರ್ಮಿಕ ಉತ್ಸಾಹ ಮತ್ತು ಜೀವಮಾನದ ಘಟನೆಯನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಅತ್ಯಂತ ಅದೃಷ್ಟಶಾಲಿ ಮತ್ತು ಧನ್ಯವಾಗಿದೆ ಎಂದು ರಾಮಭಕ್ತರು ಬರೆದುಕೊಂಡು ವಿಗ್ರಹದ ಫೋಟೋವನ್ನು ಹಂಚಿಕೊಂಡಿದ್ದಾರೆ.