ಮಂಡ್ಯ : ಬರದ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. ಲೀಟರ್ ಹಾಲಿಗೆ 1.50 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಇತ್ತ ಮನ್ಮುಲ್ ಹಾಲಿನ ದರ ಇಳಿಕೆ ಮಾಡಿದೆ. ಆದರೆ ಅತ್ತ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲಾಗಿದ್ದಾರೆ. ಮನ್ಮುಲ್ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ KMF ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಡಿಸೆಂಬರ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.
ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 33.50 ರೂ. ನೀಡಲಾಗುತ್ತಿತ್ತು. ಇದೀಗ 1.50 ಕಡಿತಗೊಳಿಸಿದ್ದು, 32 ರೂ.ಗೆ ಇಳಿಕೆಯಾಗಿದೆ. ಬರಗಾಲದಲ್ಲಿ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ರೈತ ಸಂಘ ಕಿಡಿಕಾರಿದೆ. ಕೂಡಲೇ ದರ ಹೆಚ್ಚಳ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.