ಕೊಪ್ಪಳ : ಕೊಪ್ಪಳ ತಾಲೂಕು ಹಿಟ್ನಾಳ್ ಹೋಬಳಿಯಲ್ಲಿ ಒಂದು ನೂರು ಎಕರೆಗಿಂತಲೂ ಅಧಿಕ ಸರ್ಕಾರದ ಕಂದಾಯ ಮತ್ತು ಅರಣ್ಯ ಇಲಾಖೆಯ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಅಕ್ರಮ ರೆಸಾರ್ಟ್ ಮಾಡಿರುವದು ತಾಲೂಕಿನ ಸಮೀಪದ ನಾರಾಯಣಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕೊಪ್ಪಳದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಅನಧಿಕೃತವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಸಮಾಜಿಕ ಕಾರ್ಯಕರ್ತ ವಿಜಯ್ ಎಂಬುವವರು ಸಲ್ಲಿಸಿದ್ದ ದೂರಿನ ಹಿನ್ನೆಲೆ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು ಇನ್ನೂಕೂಡ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಇರುವದು ವಿಪರ್ಯಾಸ. ಈ ಹಿನ್ನೆಲೆ ಸಮೀಕ್ಷೆ ಕೈಗೊಂಡಿದ್ದ ಅಧಿಕಾರಿಗಳ ತಂಡ ಕೊಪ್ಪಳ ತಾಲ್ಲೂಕಿನ ಹಿಟ್ನಾಳ್ ಹೋಬಳಿಯ ನಾರಾಯಣಪೇಟೆ ಗ್ರಾಮದಲ್ಲಿ ಸುಮಾರು 100ಕ್ಕಿಂತಲಲೂ ಹೆಚ್ಚು ಎಕರೆ ಕಂದಾಯ, ಅರಣ್ಯ ಭೂಮಿಯಲ್ಲಿ ಒತ್ತುವರಿಯಾಗಿದ್ದರ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.
ನಾರಾಯಣಪೇಟೆ ಎಂಬ ಗ್ರಾಮ ಆಡಳಿತಾತ್ಮಕವಾಗಿ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಹೋಬಳಿಗೆ ಸೇರಿದ್ದರೂ ಭೌಗೋಳಿಕವಾಗಿ ಗಂಗಾವತಿಗೆ ಸಮೀಪದಲ್ಲಿದೆ ಇಲ್ಲಿನ ಅಕ್ರಮ ರೆಸಾಟ್ಗಳ ಹಿಂದೆ ಪ್ರಭಾವಿ ಉದ್ಯಮಿಗಳು, ರಾಜಕೀಯ ನಾಯಕರ ಕೈವಾಡ ಇರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಸಂರಕ್ಷಿತ ಪ್ರದೇಶದಲ್ಲಿ ಆಕ್ರಮ; ತುಂಗಭದ್ರಾ ನದಿಯು ಅಪರೂಪದ, ನಿರುಪದ್ರವ ಪ್ರಾಣಿ ನೀರು ನಾಯಿಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ರಾಜ್ಯ ಸರ್ಕಾರವು 2015ರಲ್ಲಿ ಯೇ. ಮುದ್ಲಾಪುರದಿಂದ- ಕಂಪ್ಲಿ ಸೇತುವೆವರೆಗಿನ ಒಟ್ಟು 34 ಕಿಲೋ ಮೀಟರ್ ತುಂಗಭದ್ರಾ ನದಿ ತೀರವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. ಸಂರಕ್ಷಿತ ಪ್ರದೇಶದಲ್ಲಿರುವ ನದಿ ತೀರದ ಎರಡು ದಡಗಳಲ್ಲಿ ನೂರು ಮೀಟರ್ವರೆಗೆ ಯಾವುದೇ ಮಾನವ ಚಟುವಟಿಕೆ ಇರದಂತೆ ಆದೇಶವಿದೆ. ಆದರೆ ಇದೇ ಸಂರಕ್ಷಿತ ಪ್ರದೇಶದ 100 ಮೀಟರ್ ಒಳಗೆ ರೆಸಾರ್ಟ್ಗಳ ತೆರವಿಗೆ ಅಧಿಕಾರಿಗಳು ಮುಂದಾಗಿಲ್ಲ ಎಂದು ವಿಜಯ ಆರೋಪಿಸಿದ್ದಾರೆ.