ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರಿಗೆ ಗುಡ್ನ್ಯೂಸ್ ಸಿಕ್ಕಿದೆ. ಹೆವಿ ವಾಹನಗಳ ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್ಸಿ (IISC) ತಜ್ಞರ ವರದಿ ಎನ್ಹೆಚ್ಎಐ ಕೈ ಸೇರಿದೆ.
ಬೆಂಗಳೂರಿನಿಂದ ರಾಜ್ಯದ ಶೇ.80ರಷ್ಟು ಜಿಲ್ಲೆಗಳಿಗೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್ಗೆ ಹಿಡಿದಿದ್ದ ಗ್ರಹಣ ದೂರಾಗುವ ಸಂದರ್ಭ ಬಂದಿದೆ. ಇದೇ ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್ಹೆಚ್ಎಐ ಅಧಿಕಾರಿಗಳಿಗೆ ರಿಪೋರ್ಟ್ ನೀಡಿದೆ.
2 ವರ್ಷದಿಂದ ಹೆವಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸದ್ಯ ಇದೇ ಫೆಬ್ರವರಿ ಮೊದಲ ವಾರದಲ್ಲಿ ತೆರವು ಮಾಡುವ ಸಾಧ್ಯತೆ ಇದೆ. ಫ್ಲೈಓವರ್ ಎರಡು ಪಿಲ್ಲರ್ಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹೆವಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆ ಪತ್ತೆಗೆ ಮುಂದಾಗಿದ್ದ ಐಐಎಸ್ಸಿ ತಜ್ಞರು ಫ್ಲೈಓವರ್ ಕೇಬಲ್ಗಳು ಹಾಳಾಗಿದ್ದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಪಿಲ್ಲರ್ಗಳಿಗೆ ಅಳವಡಿಕೆ ಮಾಡಿದ್ದ ಕೇಬಲ್ಗಳು ತುಕ್ಕು ಹಿಡಿದಿದ್ದೆ ದೋಷಕ್ಕೆ ಕಾರಣ ಎಂಬ ರಿಪೋರ್ಟ್ ನೀಡಿವೆ.
ಕೇಬಲ್ಗಳಿಗೆ ನೀರು ತಗುಲಿದ್ದ ಕಾರಣ ಸಂಪೂರ್ಣ ಕೇಬಲ್ ತುಕ್ಕು ಹಿಡಿದಿದ್ದ ಪರಿಣಾಮ ಪಿಲ್ಲರ್ಗಳಲ್ಲಿ ಅಳವಡಿಕೆ ಮಾಡಿದ್ದ ಕೇಬಲ್ ಹಾಳಾಗಿತ್ತು. ಸದ್ಯ ಈಗ ಆ ಎಲ್ಲವನ್ನು ತೆರವು ಮಾಡಿ ಈ ಹಿಂದೆ ಅಳವಡಿಕೆ ಮಾಡಿದ್ದ ಕೇಬಲ್ಗಳಿಗಿಂತ 4 ಪಟ್ಟು ಸದೃಢವಾದ ಕೇಬಲ್ ಅಳವಡಿಕೆ ಮಾಡುವುದರ ಜೊತೆಗೆ ತುಕ್ಕು ಹಿಡಿಯದಂತೆ ಗ್ರೀಸ್ ಇರುವ ಕೇಬಲ್ ಅನ್ನು ಅಳವಡಿಕೆ ಮಾಡಲಾಗಿದೆ. ಜೊತೆಗೆ ಮುಂದೆ ಈ ರೀತಿ ಸಮಸ್ಯೆಯಾದರೆ ವಾಹನ ಓಡಾಟ ನಿಲ್ಲಿಸದೇ ಹಾಗೇ ಸರಿ ಮಾಡಬಹುದಾದ ಕ್ಷಮತೆ ಕೂಡ ಕೇಬಲ್ಗೆ ಇದೆ ಎಂದು ಐಐಎಸ್ಸಿ ವರದಿ ನೀಡಿದೆ.