ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ನಾಡಿನ ಜನತೆಗೆ ಶುಭಾಷಯ ತಿಳಿಸಿದ್ದಾರೆ.
ವಿಶೇಷ ವಿಡಿಯೋ ಮೂಲಕ ಹಬ್ಬದ ಶುಭಾಷಯ ತಿಳಿಸಿದ ಸಿಎಂ ಸಿದ್ದರಾಮಯ್ಯ, ರಾಸಾಯನಿಕ ಪಟಾಕಿಗಳ ಬಳಕೆ ಮಾಡದೆ ಹಬ್ಬ ಆಚರಿಸಿ. ರಾಸಾಯನಿಕ ಪಟಾಕಿಗಳು ಪರಿಸರಕ್ಕೆ ಹಾನಿಕಾರಕ. ಅಲ್ಲದೆ, ಹೃದಯ ಮತ್ತುಉಸಿರಾಟದ ಸಮಸ್ಯೆಗಳಿರುವ ರೋಗಿಗಳಿಗೆ ಅಪಾಯಕಾರಿ. ಹಾಗಾಗಿ, ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅನುಮತಿ ನೀಡಿದೆ. ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಎಂದಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ಅಜ್ಞಾನದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಹರಿಸಲಿ ಎಂದು ಹಾರೈಸುತ್ತೇನೆ. ಹಣತೆಗಳನ್ನು ಬೆಳಗಿ, ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸಿ ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ. ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು ಎಂದು ಸಿಎಂ ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು. ಬೆಳಕಿನ ಹಬ್ಬವು ಸರ್ವರ ಬಾಳಲ್ಲಿ ಸಂಕಷ್ಟಗಳ ಕಗ್ಗತ್ತಲೆ ದೂರವಾಗಿಸಿ ಹೊಸ ಬೆಳಕಿನ ಸಂಭ್ರಮದೊಂದಿಗೆ ಹೊಸ ವಿಶ್ವಾಸ ಮೂಡಿಸಿ, ಸಂತಸ, ಸಡಗರ ತರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.