ಬೆಂಗಳೂರು : ವಿಧಾನಸಭೆ ಚುನಾವಣೆಯಾದ ಬಳಿಕ ಕರ್ನಾಟಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ಕಲಬುರಗಿಗೆ ಭೇಟಿ ನೀಡಿ ಅಲ್ಲಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಕಲಬುರಗಿಗೆ ಆಗಮಿಸಿ ಬಳಿಕ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಮೋದಿ ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕಲಬುರಗಿಯಿಂದ ಪ್ರಧಾನಿ ಮೋದಿ ಅವರು 1.05 ಕ್ಕೆ ವಿಶೇಷ ವಿಮಾನದ ಮೂಲಕ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲಪಲಿದ್ದಾರೆ. 2.15ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಇಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ನಿರ್ಬಂಧಿಸಲಾಗಿದೆ.
ಹೆಣ್ಣೂರು ಬಾಗಲೂರು ರಸ್ತೆಯಿಂದ ಏರ್ಪೋರ್ಟ್ ಪರ್ಯಾಯ ರಸ್ತೆವರೆಗೆ, ಚಿಕ್ಕಜಾಲದ ಕೋಟೆ ರಸ್ತೆಯಿಂದ ಏರ್ಪೋರ್ಟ್ ಬ್ಯಾಕ್ಗೇಟ್ ರಸ್ತೆವರೆಗೆ, ದೇವನಹಳ್ಳಿಯ ಡಾಬಾ ಗೇಟ್ನಿಂದ ಏರ್ಪೋರ್ಟ್ ರಸ್ತೆಯವರೆಗೆ, ಗೊಲ್ಲಹಳ್ಳಿ ಗೇಟ್ನಿಂದ ಹುಣಚೂರು ಗೇಟ್ನ ಕೆಐಎಡಿಬಿ ರಸ್ತೆ ಬಂದ್ ಆಗಲಿದ್ದು, ಏರ್ಪೋರ್ಟ್ಗೆ ಬ್ಯಾಕ್ ಗೇಟ್ನಿಂದ ಬರುವ ವಾಹನ ಸವಾರರು ಪರ್ಯಾಯ ರಸ್ತೆ ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಭಟ್ಟರಮಾರನಹಳ್ಳಿ 2.45ಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸಿ, 3.55ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಸಂಜೆ 4 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.