ಸಚಿವರೇ ದುಡ್ಡು ಹೊಡೆದಿದ್ದು ಸಾಕು. ಇನ್ನಾದರೂ ಜನರ ಕೆಲಸ ಮಾಡಿ. ಖಾಸಗಿ ಆಸ್ಪತ್ರೆಗಳ ಬಾಕಿ ಹಣ ಕೊಡಿ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇರವಾಗಿ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ ಬಳಿ ಸರಕಾರದ ಕಡೆಯವರು ಹಣ ಕೇಳಿರುವ ಆಡಿಯೋ ನಮ್ಮ ಬಳಿ ಇದೆ. ಈಗ ವೈಯಕ್ತಿಕವಾಗಿ ಹೆಸರು ಹೇಳಲ್ಲ. ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದರು.
ಆಡಿಯೋ ಮಾಡಿರುವವರ ಹೆಸರು ಬಹಿರಂಗಪಡಿಸಿದರೆ ಅವರ ಮೇಲೆ ಕೇಸು ಹಾಕಿಸಿ ತೊಂದರೆ ಕೊಡ್ತಾರೆ. ಹಾಗಾಗಿ ಸದ್ಯಕ್ಕೆ ವಿವರಗಳನ್ನು ಬಹಿರಂಗಪಡಿಸಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿಸಿರ್ ಔಷಧ ಕೊಡುತ್ತಿಲ್ಲ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಕ್ಕೆ ದುಡ್ಡು ಕೊಡುತ್ತಿಲ್ಲ. ಈ ಬಗ್ಗೆ ಮಾತನಾಡಲು ಎಲ್ಲರೂ ಹೆದರುತ್ತಿದ್ದಾರೆ. ಎಲ್ಲಿ ನಮ್ಮ ವಿರುದ್ಧ ಕೇಸ್ ಹಾಕ್ತಾರೆ ಎಂಬ ಭಯ ಇದೆ ಎಂದು ಅವರು ಹೇಳಿದರು.