ಕೊರೊನಾ ವೈರಸ್ ಮೊದಲ ಅಲೆಯಲ್ಲಿ ಸ್ವಚ್ಛವಾಗಿದ್ದ ಗಂಗಾ ನದಿ ಎರಡನೇ ಅಲೆಯಲ್ಲಿ ಹಸಿರುಬಣ್ಣಕ್ಕೆ ತಿರುಗಿದ್ದು, ಮತ್ತೊಮ್ಮೆ ವಾಯುಮಾಲಿನ್ಯದ ಭೀತಿ ಆವರಿಸಿದೆ.
ಕೊರೊನಾ ಮೊದಲ ಅಲೆ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗಿತ್ತು. ಇದರಿಂದ ವಾಯುಮಾಲಿನ್ಯ ಪ್ರಮಾಣ ಕಡಿಮೆ ಆಗಿದ್ದೂ ಅಲ್ಲದೇ ಗಂಗಾ ನದಿ ಪಾತ್ರದಲ್ಲಿದ್ದ ಕೈಗಾರಿಕೆಗಳು ಮುಚ್ಚಿದ್ದರಿಂದ ರಸಾಯನಿಕ ಬಿಡುಗಡೆ ಪ್ರಮಾಣವೂ ಕುಸಿದಿತ್ತು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಗಂಗಾ ನದಿ ಹಸಿರುಬಣ್ಣಕ್ಕೆ ತಿರುಗಿದೆ. 84 ಉಪ ನದಿಗಳ ಜೀವನದಿ ಆಗಿರುವ ಗಂಗಾನದಿ ಪಾತ್ರದ ಮತ್ತೊಂದು ತುದಿಯಲ್ಲೂ ಹಸಿರುಬಣ್ಣದ ನೀರು ಕಾಣಿಸಿಕೊಂಡಿದೆ.
ನದಿಯಲ್ಲಿ ರಸಾಯನಿಕ ಪ್ರಮಾಣ ಹೆಚ್ಚಾಗಿದ್ದರಿಂದ ಈ ರೀತಿ ಹಸಿರುಬಣ್ಣಕ್ಕೆ ತಿರುಗಿದ್ದು, ಈ ನದಿಯ ನೀರನ್ನು ಕೂಡಲೇ ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ವಾರಣಾಸಿ ಘಾಟ್ ನಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟ ಪಾರ್ಥಿವ ಶರೀರವನ್ನು ಅರೆಬರೆ ಅಂತ್ಯಕ್ರಿಯೆ ಮಾಡಲಾಗಿದ್ದು, ಈ ಶವಗಳು ಗಂಗಾನದಿಯಲ್ಲಿ ತೇಲಿ ಬಂದಿದ್ದವು. ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಸರಕಾರಗಳ ಪ್ರಕಾರ ನೂರಾರು ಶವಗಳು ತೇಲಿ ಬಂದಿದ್ದವು ಎಂದು ಹೇಳಲಾಗಿದ್ದು, ಇದಕ್ಕೂ ಗಂಗಾನದಿ ಹಸಿರು ಬಣ್ಣಕ್ಕೆ ತಿರುಗುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ಕಾದು ನೋಡಬೇಕಿದೆ.