ಬೆಂಗಳೂರು : ಮನೆಕೆಲಸಕ್ಕೆಂದು ಬಂದು ಮನೆಯಲ್ಲಿದ್ದ ಚಿನ್ನ, ನಗದು, ಬೆಳ್ಳಿನಾಣ್ಯಗಳೊಳಗೊಂಡ ಲಾಕರ್ ಸಮೇತ ಪರಾರಿಯಾಗಿದ್ದ ಕಳ್ಳರನ್ನು ವೈಟ್ ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚತ್ತೀಸ್ ಗಡ ಮೂಲದ ಸುನೈನ, ಅಸ್ಸಾಂ ಮೂಲದ ಮೀನ್ ಹಾಜುದ್ದೀನ್, ಬಿಹಾರದ ಚಂದನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ ಯಮಲೂರಿನ ನಿತೀನ್ ಅಗರ್ ವಾಲ್ ಎಂಬುವರ ಮನೆಯಲ್ಲಿ ಸುನೈನ ಹಾಗೂ ಚಂದನ್ ಕುಮಾರ್ ಅಡುಗೆ ಮಾಡುವುದು ಮತ್ತು ಸ್ವಚ್ಛ ಮಾಡುವ ಕೆಲಸ ಮಾಡಿಕೊಂಡಿದ್ದರು.
ನಿತೀನ್ ರವರು ತಮ್ಮ ಲಾಕರ್ ನಲ್ಲಿ ಒಂದು ಕೆ.ಜಿ.ಚಿನ್ನ ಹಾಗೂ 50 ಸಾವಿರ ನಗದು ಇಟ್ಟಿರುವುದನ್ನು ಗಮನಿಸಿದ ಆರೋಪಿಗಳಯ ಯಾರೂ ಇಲ್ಲದ ಸಮಯ ನೋಡಿಕೊಂಡು ಲಾಕರ್ ಸಮೇತ ಅಲ್ಲಿಂದ ಪರಾರಿಯಾಗುತ್ತಾರೆ. ನಂತರ ಮೀನ್ ಹಾಜುದ್ದೀನ್ ಗೆ ಲಾಕರ್ ನೀಡಿ ಅದರಲ್ಲಿರುವ ಚಿನ್ನ ಮಾರಾಟ ಮಾಡಿ ನಗದು ನೀಡಲು ತಿಳಿಸುತ್ತಾರೆ. ಈತ ಬೆಂಗಳೂರು ನಗರ ಹಾಗೂ ಅಸ್ಸಾಂ ರಾಜ್ಯದಲ್ಲಿ ಮಾರಾಟ ಮಾಡಿರುತ್ತಾನೆ.
ನಿತೀನ್ ಅವರು ಪ್ರಕರಣ ಸಂಬಂದ ಮಾರತ್ತಹಳ್ಳಿ ಪೊಲೀಸರಿಗೆ ದೂರು ನೀಡುತ್ತಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಾರತ್ತಹಳ್ಳಿ ಪೊಲೀಸರು ವೈಟ್ ಫೀಲ್ಡ್ ಉಪ ಪೊಲೀಸ್ ಆಯುಕ್ತ ದೇವರಾಜ್, ಮಾರತ್ತಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪಂಪಾಪತಿ ರವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.