ಭರ್ಜರಿ ಆರಂಭದ ಹೊರತಾಗಿಯೂ ಇಂಗ್ಲೆಂಡ್ ಬೌಲರ್ ಗಳ ದಾಳಿಗೆ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 329 ರನ್ ಗಳಿಗೆ ಆಲೌಟಾಗಿದೆ.
ಪುಣೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 48.2 ಓವರ್ ಗಳಲ್ಲಿ 329 ರನ್ ಗಳಿಗೆ ಪತನಗೊಂಡಿತು.
ಭಾರತದ ಪರ ಶಿಖರ್ ಧವನ್, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಬಿರುಸಿನ ಅರ್ಧಶತಕ ಸಿಡಿಸಿದರೂ ಇಂಗ್ಲೆಂಡ್ ಬೌಲರ್ ಗಳ ಸಂಘಟಿತ ದಾಳಿಯಿಂದಾಗಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸರಣಿಯಲ್ಲಿ ಮೊದಲ ಬಾರಿ ಆಲೌಟಾಯಿತು.
ರೋಹಿತ್ ಶರ್ಮ ಮತ್ತು ಧವನ್ ಮೊದಲ ವಿಕೆಟ್ ಗೆ 103 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಆದರೆ ರೋಹಿತ್ (37) ಮತ್ತು ಶಿಖರ್ ಧವನ್ (67 ರನ್, 56 ಎಸೆತ, 10 ಬೌಂಡರಿ), ನಾಯಕ ವಿರಾಟ್ ಕೊಹ್ಲಿ (7) ಮತ್ತು ಕೆ.ಎಲ್. ರಾಹುಲ್ (7) ಒಬ್ಬರ ನಂತರ ಒಬ್ಬರಂತೆ ವಿಕೆಟ್ ಕೈಚೆಲ್ಲಿದರು.
157 ರನ್ ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ತಂಡಕ್ಕೆ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ 5ನೇ ವಿಕೆಟ್ ಗೆ 99 ರನ್ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು. ಈ ಹಂತದಲ್ಲಿ ಮತ್ತೆ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 4ಸಿಕ್ಸರ್ ಸೇರಿದ 72 ರನ್ ಗಳಿಸಿದ್ದ ರಿಷಭ್ ಪಂತ್ ಮತ್ತು 44 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 64 ರನ್ ಬಾರಿಸಿದ್ದ ಹಾರ್ದಿಕ್ ಪಾಂಡ್ಯ ಔಟಾಗಿ ಭಾರತಕ್ಕೆ ಆಘಾತ ಉಂಟಾಯಿತು.
ಈ ಹಂತದಲ್ಲಿ ತಾಳ್ಮೆಯಿಂದ ಆಡಿದ ಕೃನಾಲ್ ಪಾಂಡ್ಯ (25) ಮತ್ತು ಶಾರ್ದೂಲ್ ಠಾಕೂರ್ (30) ತಂಡವನ್ನು 300ರ ಗಡಿ ದಾಟಿಸಿದರು. ಆದರೆ ಕೊನೆಯಲ್ಲಿ ಒಂದು ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಮುಗ್ಗರಿಸಿತು.
ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಆದಿಲ್ ರಷೀದ್ 2 ವಿಕೆಟ್ ಪಡೆದರೆ, ಉಳಿದೆಲ್ಲಾ ಬೌಲರ್ ಗಳು ತಲಾ 1 ವಿಕೆಟ್ ಪಡೆದರು.