ಅನ್ಯ ಕೋಮಿನ ಯುವತಿ ಜೊತೆಗಿದ್ದ ಕಾರಣಕ್ಕಾಗಿ ಯುವಕನನ್ನು ಥಳಿಸಿದ್ದೂ ಅಲ್ಲದೇ ಇರಿದ ಪ್ರಕರಣದಲ್ಲಿ ಭಜರಂಗ ದಳದ ನಾಲ್ವರು ಸೇರಿದಂತೆ 8 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಸಹಪಾಠಿಗಳು ಹಾಗೂ ಸ್ನೇಹಿತರಾಗಿದ್ದ ಯುವಕ ಮತ್ತು ಯುವತಿ ಬಸ್ ನಿಂದ ಕೆಳಗೆ ಇಳಿಯುತ್ತಿದ್ದಾಗ ಗುಂಪೊಂದು ಹಲ್ಲೆ ಮಾಡಿ 23 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆ ತಡೆಯಲು ಬಂದ ಯುವತಿಗೂ ಗಾಯಗಳಾಗಿವೆ ಎಂದರು.
ಹಲ್ಲೆ ನಡೆಸಿದ ಗುಂಪಿನಲ್ಲಿದ್ದ 7ರಿಂದ 8 ಮಂದಿಯನ್ನು ಬಂಧಿಸಲಾಗಿದ್ದು, ಭಜರಂಗದ ದಳದ ಉಳಿದ ನಾಲ್ವರು ಕಾರ್ಯಕರ್ತರಿಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಯುವತಿ ಬಸ್ ನಲ್ಲಿ ಬೆಂಗಳೂರಿಗೆ ತೆರಳಬೇಕಿದ್ದು, ಯುವಕ ಆಕೆಗೆ ಸಹಾಯ ಮಾಡಲು ಬಂದಿದ್ದ. ಈ ವೇಳೆ ಬಸ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿದ ಗುಂಪು ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ಯುವಕನನ್ನು ಥಳಿಸಿದ್ದೂ ಅಲ್ಲದೇ ಪುಷ್ಠದ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.