ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ. ಲಸಿಕೆ ನೀಡಿಲ್ಲ. ರೆಮ್ಡಿಸಿವಿರ್ ಕೊಡುತ್ತಿಲ್ಲ. ಬೆಡ್ ಗಳು ಸಿಗುತ್ತಿಲ್ಲ. ಔಷಧ ಸರಿಯಾಗಿ ಕೊಡದೇ ರಾಜ್ಯ ಸರಕಾರ ಜನರ ಕೊಲೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್ ಶಾಸಕರ ಸಭೆ ಕರೆದು ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಲಾಕ್ ಡೌನ್ ಮಾಡಿದ್ದಾರೆ, ಅದು ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡಿಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ಯಾವ ಪರಿಹಾರ ಕೊಟ್ಟಿಲ್ಲ ಎಂದರು.
ನಾನು ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದು ಒತ್ತಾಯಿಸಿದೆ. ಆದರೂ ಸರ್ಕಾರ ವಿಶೇಷ ಪ್ಯಾಕೇಜ್ ಕೊಟ್ಟಿಲ್ಲ. ಸಮಸ್ಯೆ ಬಗೆಹರಿಸಲು ಆಗದೇ ಇದ್ದರೆ ಯಡಿಯೂರಪ್ಪ ಯಾಕೆ ಸಿಎಂ ಆಗಿರಬೇಕು. ಸಚಿವರು ಯಾಕೆ ಮುಂದುವರಿಯಬೇಕು ಎಂದು ಅವರು ಪ್ರಶ್ನಿಸಿದರು.
ಜನರಿಗೆ ಆಕ್ಸಿಜನ್ ಸಿಗ್ತಿಲ್ಲ, ರೆಮಿಡಿಸಿವಿರ್ ಔಷಧಿ ಸಿಗ್ತಿಲ್ಲ. ಕೊರೊನಾ ಎರಡನೇ ಅಲೆಯ ಮುನ್ಸೂಚನೆ ಇದ್ದರೂ ಇವರು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಲ್ವೇ? ಜನರ ಸಮಸ್ಯೆಗೆ ತಕ್ಕಂತೆ ಸ್ಪಂದಿಸದೇ ಪರೋಕ್ಷವಾಗಿ ಕೊಲೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.