ಇದು ಬಿಜೆಪಿಯಲ್ಲ, 3 ಪಕ್ಷದ ಸರ್ಕಾರ: ಸಿ.ಪಿ. ಯೋಗೇಶ್ವರ್​ ಟಾಂಗ್

ಮುಖ್ಯಮಂತ್ರಿ ಬದಲಾವಣೆ ನನ್ನ ಉದ್ದೇಶವಲ್ಲ. ಅಷ್ಟೊಂದು ಶಕ್ತಿಯೂ ನನಗಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಕ್ಕಿರುವುದು ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಯಿಸುವ ಅಭಿಪ್ರಾಯ ನನಗೆ ಇಲ್ಲ. ನನ್ನ ಸಮಸ್ಯೆ ಹೇಳಿಕೊಳ್ಳಲು ದೆಹಲಿಗೆ ಹೋಗಿದ್ದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಕ್ಕಾಗಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದರು.

ನಾನೊಬ್ಬ ಸಚಿವ ಇವತ್ತು. ನನ್ನ ಸಚಿವಗಿರಿಯನ್ನು ನನ್ ಮಗ ಚಲಾಯಿಸಿದ್ರೆ ನಾನು ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸೋದು ಇಷ್ಟವಿಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದೀನಿ, ಅರ್ಥ ಮಾಡ್ಕೊಳ್ಳಿ. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ ಇದು. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡ್ಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡ್ಕೊಂಡಿದೆ ನಮ್ ಸರ್ಕಾರ ಎಂದು ಅವರು ಆರೋಪಿಸಿದರು.

ನನ್ನ ಸಮಸ್ಯೆ ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತೀನಿ. ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ತೇನೆ. ನನ್ನ ಅಧಿಕಾರದಲ್ಲಿ ನನ್ ಮಗ ಮೂಗು ತೂರಿಸಿದ್ರೆ ಸರಿಯಲ್ಲ. ಆದರೆ ರಾಜ್ಯದಲ್ಲಿ ಇದೇ‌ ನಡೀತಿರೋದು ಎಂದು ತಮ್ಮ ಖಾತೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ದೆಹಲಿ ಭೇಟಿ ಯಾಕೆ ಇಷ್ಟೊಂದು ಸುದ್ದಿಯಾಯ್ತೋ ಗೊತ್ತಿಲ್ಲ. ನಾನು ಬೆಳಗ್ಗೆ ಹೋದೆ ಸಂಜೆ ಬಂದೆ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಅರವಿಂದ ಬೆಲ್ಲದ ಯಾಕೆ ದೆಹಲಿಗೆ ಹೋಗಿದ್ದರೋ ಗೊತ್ತಿಲ್ಲ ಎಂದು ಯೋಗೇಶ್ವರ್ ಹೇಳಿದರು.

ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತಾಡ್ತಿರೋದು ಗೊತ್ತು. ಅದನ್ನ ಯಾರು ಮಾತಾಡಿಸ್ತಿರೋದು ಅಂತಲೂ ಗೊತ್ತು. ಯಾರ ಕುಮ್ಮಕ್ಕಿದೆ ಅಂತಲೂ ಗೊತ್ತು. ಕೆಲವು ವಿಚಾರ ಹಂಚ್ಕೊಳ್ಳಲು ಆಗಲ್ಲ ಎಂದು ನುಡಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!