ನಾನು ಮುಸ್ಲಿಂ ಎಂಬ ಕಾರಣಕ್ಕೆ ನೃತ್ಯ ಹೇಳಿಕೊಡಲು ಭರತನಾಟ್ಯ ಗುರುಗಳು ನಿರಾಕರಿಸಿದ್ದರು. ನನ್ನ ಜಾತಕ ನೋಡಿದ ನಂತರ ಶಿಷ್ಯೆಯಾಗಿ ಸ್ವೀಕರಿಸಿದರು ಎಂದು ಬಾಲಿವುಡ್ ಹಿರಿಯ ನಟಿ ವಹೀದಾ ರೆಹಮಾನ್ ಹೇಳಿದ್ದಾರೆ.
ಡ್ಯಾನ್ಸ್ ದಿವಾನೆ-3 ರಿಯಾಲಿಟಿ ಶೋನಲ್ಲಿ ಹಿರಿಯ ನಟಿಯರಾದ ಹೆಲನ್ ಮತ್ತು ಆಶಾ ಪರೇಖ್ ಜೊತೆ ಅತಿಥಿಯಾಗಿ ಪಾಲ್ಗೊಂಡಿದ್ದ ವಹೀದಾ ರೆಹಮಾನ್, ನಾಟ್ಯ ಕಲಿಯುವಾಗ ಅನುಭವಿಸಿದ ಕಷ್ಟಗಳ ಬಗ್ಗೆ ಹೇಳಿ ಎಂದು ನಟಿ ಮಾಧುರಿ ದೀಕ್ಷಿತ್ ಪ್ರಶ್ನಿಸಿದಾಗ ಅವರು ಬಾಲ್ಯದ ಘಟನೆಯನ್ನು ವಿವರಿಸಿದರು.
ಚೆನ್ನೈನಲ್ಲಿ ಒಬ್ಬರು ಖ್ಯಾತ ಭರತನಾಟ್ಯ ಗುರುಗಳಿದ್ದರು. ನಾನು ಅವರ ಬಳಿ ಕಲಿಯುವುದಾಗಿ ಸ್ನೇಹಿತೆಗೆ ಹೇಳಿದ್ದೆ. ಆದಕ್ಕೆ ಅವರು ನಾನು ನಿನಗೆ ಭರತನಾಟ್ಯ ಹೇಳಿಕೊಡುವುದಿಲ್ಲ ಎಂದರು. ನಾನು ಯಾಕೆ ಎಂದು ಮರು ಪ್ರಶ್ನಿಸಿದೆ. ಹುಡುಗಿ ಮುಸ್ಲಿಂ ಅವಳಿಗೆ ಏನು ಸಂಬಂಧವಿದೆ ಎಂದರು.
ನಾಟ್ಯ ಕಲಿಯಲು ಮುಸ್ಲಿಂ ಆದರೇನು? ಕ್ರಿಶ್ಚಿಯನ್ ಆದರೇನು? ಅದಕ್ಕೂ ಇದಕ್ಕೂ ಏನು ಸಂಬಂಧ? ಇದೆಲ್ಲಾ ಅವರ ಭಾವನೆಗಳಿಗಷ್ಟೇ ಎಂದೆ. ಆಗ ಅವರು ಭರತನಾಟ್ಯದಲ್ಲಿ ಬರುವ ಭಾವ, ಪಾದ, ವರ್ಣಗಳನ್ನು ನೀನು ಮಾಡಲು ಸಾಧ್ಯವಿಲ್ಲ ಎಂದರು.
ನಾನು ಕಲಿಯಲು ಹಠ ಹಿಡಿದಾಗ ಕುಂಡಲಿ (ಜಾತಕ) ಕೊಡಿ ಅಂದರು. ನಾವು ಜಾತಕ ಮಾಡಿಸಲ್ಲ ಅಂದೆವು. ಜಾತಕ ಮಾಡಿಸಿಲ್ಲ ಅಂದರೆ ಸಮಸ್ಯೆ ಆಗುತ್ತೆ. ಸರಿ ಜನ್ಮ ದಿನಾಂಕ ಕೊಡು. ನಾನು ಜಾತಕ ಮಾಡಿಸುತ್ತೇನೆ ಅಂದರು. ಜಾತಕ ಮಾಡಿಸಿದ ನಂತರ ಓಹೋ ನಿನಗೆ ಅದ್ಭುತ ಭವಿಷ್ಯವಿದೆ. ನೀನು ನನ್ನ ಕೊನೆಯ ಮತ್ತು ಅತ್ಯುತ್ತಮ ಶಿಷ್ಯೆ ಆಗುತ್ತಿಯ ಎಂದು ಹೇಳಿ ನನ್ನನ್ನು ಶಿಷ್ಯೆಯಾಗಿ ಸ್ವೀಕರಿಸಿದರು ಎಂದು ವಹೀದಾ ರೆಹಮಾನ್ ಘಟನೆಯನ್ನು ವಿವರಿಸಿದರು.