ದಿನವೀಡಿ ನಾಟಕೀಯ ಬೆಳವಣಿಗೆ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದ ಯುವತಿ ಮಂಗಳವಾರ ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಬೆಂಗಳೂರಿನ 1ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಸಿಡಿ ಯುವತಿಯ ಹೇಳಿಕೆ ದಾಖಲಿಸಲು ಅನುಮತಿ ನೀಡಿದ್ದೂ ಅಲ್ಲದೇ ಆಕೆಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ನ್ಯಾಯಾಲಯಕ್ಕೆ ಹಾಜರಾಗುವ ಸುಳಿವು ಇದ್ದರೂ ದಿನವೀಡಿ ನಡೆದ ನಾಟಕೀಯ ಬೆಳವಣಿಗೆ ನಂತರ ಯುವತಿ ಬೆಂಗಳೂರಿನ ಗುರುನಾನಕ್ ಬಳಿ ನ್ಯಾಯಾಧೀಶರು ಹೇಳಿಕೆ ದಾಖಲಿಸಿಕೊಂಡರು.
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆ ವೇಳೆ ಯುವತಿ ಹೇಳಿಕೆಯನ್ನು ನೀಡಿದ್ದು, ಇದರ ಬೆನ್ನಲ್ಲೇ ಎಸ್ ಐಟಿ ವಿಚಾರಣೆಗೆ ನೋಟಿಸ್ ಜಾರಿ ಮಾಡಿದ್ದರಿಂದ ಅಡುಗೋಡಿ ಟೆಕ್ನಿಕಲ್ ವಿಂಗ್ ಮುಂದೆ ಹಾಜರಾದರು. ಈ ಮೂಲ ಸಿಡಿ ಪ್ರಕರಣ ಹೊರಬಂದ 28 ದಿನಗಳ ನಂತರ ಯುವತಿ ಹೇಳಿಕೆ ದಾಖಲಿಸಿದರು.