ಛತ್ತೀಸ್ಗಢ : ಏಪ್ರಿಲ್ 3 ರಂದು ಬಿಜಾಪುರದ ಗುಂಡಿನ ಚಕಮಕಿಯ ಸಂದರ್ಭದಲ್ಲಿ ನಕ್ಸಲರಿಂದ ಅಪಹರಿಸಲ್ಪಟ್ಟ ಸಿಆರ್ಪಿಎಫ್ ಕೊಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಈ ಕುರಿತು ಛತ್ತೀಸ್ಗಢ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಯೋಧ ಸುರಕ್ಷಿತವಾಗಿ ಸಿಆರ್ಪಿಎಫ್ ಪಡೆಯ ಕಚೇರಿಯನ್ನು ತಲುಪಿದ್ದಾರೆ ಎಂದು ಹೇಳಿದೆ.
ರಾಕೇಶ್ವರ್ ಸಿಂಗ್ ಬಿಡುಗಡೆಗೆ ಪತ್ನಿ ಸಂತಸ:
ಅವರು ಖಂಡಿತವಾಗಿಯೂ ವಾಪಸ್ ಬಂದೇ ಬರುತ್ತಾರೆ ಎಂದು ನಾನು ಬಹಳಷ್ಟು ಭರವಸೆಯನ್ನು ಇಟ್ಟುಕೊಂಡಿದ್ದೆನು. ಇಂದು ನನ್ನ ಪಾಲಿಗೆ ಅತೀವ ಸಂತೋಷದ ದಿನವಾಗಿದೆ. ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಕೋಬ್ರಾ ಜವಾನ್ ರಾಕೇಶ್ವರ್ ಸಿಂಗ್ ಮನ್ಹಸ್ ಅವರ ಪತ್ನಿ ಮೀನು ಅವರು ತಿಳಿಸಿದ್ದಾರೆ.
ಬಸ್ತಾರ್ -ಬಿಜಾಪುರ ದಂಡಕಾರಣ್ಯ ಪ್ರದೇಶದಲ್ಲಿ ನಕ್ಸಲರು, ಯೋಧರೊಂದಿಗೆ ನಡೆದ ಗುಂಡಿನ ಕಾಳಗದ ವೇಳೆ ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು. ಸ್ಥಳೀಯ ಪತ್ರಕರ್ತರು ಸೇರಿದಂತೆ 11 ಮಂದಿ ಸದಸ್ಯರ ತಂಡ ಮಾವೋವಾದಿಗಳ ಜೊತೆ ನಿರಂತರವಾಗಿ ಮಾತುಕತೆ ನಡೆಸಿ ರಾಕೇಶ್ವರ್ ಸಿಂಗ್ ಅವರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.