ಬೆಂಗಳೂರು: ಒಣ ತ್ವಚೆ ಹಲವರ ಸಮಸ್ಯೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತ್ವಚೆ ಒಣಗಿ ನಾನಾ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದ ನಮ್ಮ ಸೌಂದರ್ಯ ಸಹ ಕಳೆಗುಂದಿದಂತೆ ಕಾಣುತ್ತದೆ. ಕೆಲವರಿಗೆ ಆನುವಂಶಿಕವಾಗಿಯೂ ಈ ಸಮಸ್ಯೆ ಬಂದಿರುತ್ತದೆ. ಕೆಲವರಿಗೆ ಧೂಳು, ಹವಾಮಾನ ವೈಪರೀತ್ಯ, ಸೌಂದರ್ಯ ಉತ್ಪನ್ನಗಳ ಅತಿಯಾದ ಬಳಕೆಯಿಂದಲೂ ಈ ತೊಂದರೆ ಕಾಣಿಸಿಕೊಳ್ಳುತ್ತದೆ.
ತೆಂಗಿನೆಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ತೆಂಗಿನೆಣ್ಣೆಯಲ್ಲಿರುವ ಎಮೋಲಿಯಂಟ್ಗಳು ಚರ್ಮದ ಕೋಶಗಳ ನಡುವಿನ ಸ್ಥಳವನ್ನು ತುಂಬಿಸಿ ಮೃದುವಾದ ಮೇಲ್ಮೈಯನ್ನು ಸೃಷ್ಟಿಸುತ್ತವೆ. ಇದರಿಂದ ತ್ವಚೆ ತೇವಾಂಶದಿಂದ ಕೂಡಿ ಕಂಗೊಳಿಸುತ್ತದೆ.
ಓಟ್ ಮೀಲ್ ಒಣತ್ವಚೆಗೆ ರಾಮಬಾಣ. ಓಟ್ಸ್ನ್ನು ಪುಡಿಮಾಡಿ ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಮುಖಕ್ಕೆ ಲೇಪಿಸಬೇಕು. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇದನ್ನು ವಾರಕ್ಕೆರಡು ಬಾರಿ ಮಾಡುವುದರಿಂದ ತ್ವಚೆ ಕಾಂತಿಯುತವಾಗುವುದಲ್ಲದೇ, ತೇವಾಂಶದಿಂದ ಕೂಡಿರುತ್ತದೆ.
ಅಗಸೆ ಬೀಜದಲ್ಲಿ ಒಮೆಗಾ-3 ಹೇರಳವಾಗಿ ದೊರೆಯುವುದರಿಂದ ಒಣ ತ್ವಚೆಯ ಸಮಸ್ಯೆಗೆ ಅಗಸೆಬೀಜ ಸೇವನೆ ಅಥವಾ ಅದರ ಫೇಸ್ಪ್ಯಾಕ್ ಉತ್ತಮ. ಅಗಸೆ ಬೀಜವನ್ನು ಪುಡಿ ಮಾಡಿ ಅದಕ್ಕೆ ಮೊಸರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಮುಖವನ್ನು ಸ್ವಚ್ಛವಾಗಿ ತೊಳೆದ ನಂತರ ಈ ಪೇಸ್ಟ್ನ್ನು ಮುಖಕ್ಕೆ ಲೇಪಿಸುವುದರಿಂದ ಒಣತ್ವಚೆ ಸಮಸ್ಯೆ ನಿವಾರಣೆಯಾಗುತ್ತದೆ.
ಬೆಣ್ಣೆಹಣ್ಣಿನ ಸಿಪ್ಪೆಯಿಮದ ಮಸಾಜ್ ಮಾಡಿಕೊಂಡರೆ ತ್ವಚೆ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುವುದು. ಅಲ್ಲದೇ ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಿ ಮೃದು ಮತ್ತು ಕಾಂತಿಯುತವಾಗಿ ಮಾಡುತ್ತದೆ.