ಮಂಗಳೂರು : ಸಿ ಟಿ ರವಿಗೆ ಕುಲ ಗೋತ್ರ ಗೊತ್ತಿಲ್ಲದ ಮನುಷ್ಯ. ಅವನ ಮಾತಿಗೆ ಅಷ್ಟು ಮಹತ್ವ ಇಲ್ಲ. ಇವರೆಲ್ಲಾ ಪ್ರಚೋದನೆ ಮಾಡಿ ರಾಜಕಾರಣ ಮಾಡುವವರು. ಜನಸೇವೆ ಮಾಡಿ ಸ್ಥಾನಮಾನಕ್ಕೆ ಬಂದವರಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅಲ್ಲ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟವರು. ಕಾಂಗ್ರೆಸ್ ನಾಯಕರು ಹೋರಾಟ ಮಾಡಿ ಜೈಲಿಗೆ ಹೋದ್ರೆ ಸಿಎಂ ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರೇ ಬಿಜೆಪಿಯವರಿಗೆ ಉತ್ತಮ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಬ್ಬ ಮುಖಂಡರಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು ಅಂತಾ ಹೇಳಿಕೆ ನೀಡುತ್ತಾರೆ. ಅವರ ಅಜ್ಜ ಕೂಡಾ ಅವತ್ತು ಕಾಂಗ್ರೆಸ್ ನಲ್ಲಿ ಇದ್ದು ಕಾಂಗ್ರೆಸ್ ಎಂಬ ಹಡಗಿನಲ್ಲಿ ಬಂದಿರಬಹುದು. ನಮ್ಮ ಪಕ್ಷದ ಬಗ್ಗೆ ಅವರಿಗೆ ಚಿಂತೆ ಬೇಡ. ನಮ್ಮ ಮನೆ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಗೊತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ರಮಾನಾಥ ರೈ ಕಿಡಿಕಾರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳು ಮತ್ತು ಸಚಿವರು, ಶಾಸಕರ ನಡುವೆ ಸಮನ್ವಯತೆ ಇಲ್ಲ ಎಂದರು.