ಬೆಂಗಳೂರು: ರಾಜ್ಯದ ಆರು ಜಿಲ್ಲಾ ಕೇಂದ್ರ ಸೇರಿ ಏಳು ನಗರ ಪ್ರದೇಶಗಳಲ್ಲಿ ಏಪ್ರಿಲ್10 ರಿಂದ 20 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ಕೊರೋನಾ ಹೆಸರಿನಲ್ಲಿ ನೈಟ್ ಕರ್ಫ್ಯೂವನ್ನ ಜಾರಿಗೊಳಿಸುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ವೀಡಿಯೋ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಜೊತೆ ಕೊರೋನಾ ನಿಯಂತ್ರಣ ಕುರಿತು ಸುದೀರ್ಘ ಚರ್ಚೆಯಾಗಿದೆ, ಪ್ರಧಾನಿಯವರ ಕೆಲ ಸಲಹೆ ಕೊಟ್ಟಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಕೆಲ ಪ್ರಮುಖ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 05 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ನಗರ, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕೂರು, ಉಡುಪಿ ಜಿಲ್ಲಾ ಕೇಂದ್ರ ಮತ್ತು ಮಣಿಪಾಲ್ಗೆ ನಗರಕ್ಕೆ ಮಾತ್ರ ಕರ್ಫ್ಯೂ ಅನ್ವಯವಾಗಲಿದೆ. ಕೊರೋನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮಾಸ್ಕ್ ಹಾಕದೇ ಇದ್ದಲ್ಲಿ ದಂಡ ಹಾಕಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು,ಸಭೆ, ಸಮಾರಂಭ, ಮದುವೆ ಸಮಾರಂಭ ಎಲ್ಲಾ ಕಡೆ ನಾಳೆಯಿಂದಲೇ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು.
ನೈಟ್ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ದೊಡ್ಡ ಸಮಾರಂಭ ಮಾಡಬಾರದು. ನೈಟ್ ಕರ್ಫ್ಯೂ ವೇಳೆ ಬಸ್ ಸಂಚಾರ ಇರಲಿದೆ, ಜನರ ಓಡಾಟ ಮಾತ್ರ ಇರಲ್ಲ. ಇಷ್ಟೆಲ್ಲಾ ಮಾಡಿಯೂ ಕೊರೋನಾ ಕಡಿಮೆ ಆಗದೇ ಇದ್ದಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗುತ್ತದೆ. ಇದು ಪ್ರಾಯೋಗಿಕ ಪ್ರಯತ್ನವಾಗಿ ಮಾಡಲಾಗುತ್ತಿದೆ. ಇನ್ನೂ ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ಆಚರಿಸಲು ಸೂಚನೆ ಕೊಟ್ಟಿದ್ದಾರೆ ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.