ಮೈಸೂರು: ರಾಜ್ಯದಲ್ಲಿ ನೂರಷ್ಟು ಸಂಖ್ಯೆಯಲ್ಲಿ ಬ್ಲ್ಯಾಕ್ ಫಂಗಸ್ ಇದೆ. ಆದರೆ, ರಾಜ್ಯದಲ್ಲಿ ಇಲ್ಲಿಯವರೆಗೂ ಯಾವುದೇ ಸಾವು ಸಂಭವಿಸಿರುವ ಮಾಹಿತಿ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಸದ್ಯ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಕೊರತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ. ಕೆಲವೇ ವಾರಗಳಲ್ಲಿ ಅಗತ್ಯವಿರುವ ಔಷಧಿ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕೆ ಔಷಧಿ ಪೂರೈಕೆಯಾಗುತ್ತದೆ. ಹೊರ ದೇಶದ ಜೊತೆ ಔಷಧಿ ಆಮದು ಮಾಡಿಕೊಳ್ಳಲು ಪ್ರಯತ್ನ ನಡೆದಿದೆ. ಇದನ್ನು ಯಾರು ಮುಚ್ಚಿಡದೆ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಮಂಡ್ಯದಲ್ಲಿ ಮೂರು ಪ್ರಕರಣಗಳು ಕಂಡುಬಂದಿತ್ತು ಎಂದು ಹೇಳಲಾಗಿತ್ತು, ಆದರೆ ಈ 3ರ ಪೈಕಿ ಎರಡು ಬ್ಲಾಕ್ ಫಂಗಸ್ ಪ್ರಕರಣ ಅಲ್ಲ. ಇನ್ನು ಮೈಸೂರಿನ ಸಾವು ಪ್ರಕರಣದ ಬಗ್ಗೆಯೂ ಮಾಹಿತಿ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ 23 ರಂದು ತೀರ್ಮಾನ ತಿಳಿಸಲಿದ್ದಾರೆ. ರಾಜ್ಯದ ಅಂಕಿ ಅಂಶಗಳ ಗಮನಿಸಿ ಮತ್ತಷ್ಟು ಬಿಗಿ ಕ್ರಮವಹಿಸಬೇಕಾ, ಇಲ್ಲ ಸಡಿಲಗೊಳಿಸಬೇಕ ಎಂಬುದು ತೀರ್ಮಾನವಾಗುತ್ತೆ. ಆದರೆ, ಈ ಬಗ್ಗೆ ಭಯವಂತು ಇದ್ದೆ ಇದೆ. ಸಾರ್ವಜನಿಕ ವಲಯದಲ್ಲಿ ಗಣ್ಯರು, ವಿರೋಧ ಪಕ್ಷದವರ ಸಲಹೆ ಪರಿಗಣಿಸುತ್ತೇವೆ. ಲಾಕ್ ಡೌನ್ ಬಗ್ಗೆ ನನ್ನ ವೈಯುಕ್ತಿಕ ಅಭಿಪ್ರಾಯ ಇಲ್ಲ ಎಂದರು.