ರಾಯಚೂರು : ರಾಜ್ಯದಲ್ಲಿ ನಾಯಕತ್ವದ ಬದಲಿಸುವ ಮಾತೇ ಇಲ್ಲ. ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಲು ಆ ಪಕ್ಷದ ಕೆಲವು ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದರು.
ಪಕ್ಷದಿಂದ ನೀಡಿರುವ ನೋಟಿಸ್ ಅನ್ನು ಲವ್ಲೆಟರ್ಗೆ ಹೋಲಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಗರಂ ಆಗಿರುವ ಕಟೀಲ್, ಲವ್ ಲೆಟರ್ ಯಾವುದು, ನೋಟಿಸ್ ಯಾವುದು ಎಂಬ ಜ್ಞಾನ ಇಲ್ಲದವರ ಕುರಿತು ಏನಂತ ಮಾತನಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಿಂದ ನನ್ನನ್ನು ಯಾರಿಂದಲೂ ಹೊರ ಹಾಕಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿರುವ ಯತ್ನಾಳ್ ಕುರಿತು ಮಾತನಾಡಿ, ಇದು ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಪಕ್ಷದಲ್ಲಿದೆ. ಇದನ್ನು ಮೀರಿದರೆ ಮತ್ತೊಂದು ನೋಟಿಸ್ ಹೋಗುತ್ತೆ. ಆವಾಗಲೂ ಹದ್ದುಮೀರಿ ಅವರೇ ಹೊರಗೆ ಹೋಗಬೇಕೆನ್ನುವುದಿದ್ದರೆ ಅದು ಅವರ ತಪ್ಪು ಎಂದು ಹೇಳಿದರು.