ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಆರ್ ಸಿಬಿ ಶುಭಾರಂಭ ಮಾಡಿತು. ಅದರಲ್ಲೂ ರನ್ ಬರ ಎದುರಿಸುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್ ಅಲ್ಲದೇ ಸ್ವತಃ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸಿದ್ದರಿಂದ ತಂಡ ಸ್ವಲ್ಪ ಸಮಾಧಾನ ಹೊಂದಿದೆ. ಅಲ್ಲದೇ ಕೊರೊನಾದಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕಲ್ ನಾಳಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದರೆ ತಂಡದ ಬಲ ಮತ್ತಷ್ಟು ಬಲಗೊಳ್ಳಲಿದೆ.
ಆರ್ ಸಿಬಿ ತಂಡ ಯಜುರ್ವೆಂದ್ರ ಚಾಹಲ್, ಜೇಮಿನ್ಸನ್, ಮೊಹಮದ್ ಸಿರಾಜ್ ಮತ್ತಷ್ಟು ಮೊನಚಾದ ದಾಳಿ ನಡೆಸಬೇಕಾಗಿದೆ.
ಮೊದಲ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಗೆಲುವಿನ ಹಾದಿಗೆ ಮರಳುವ ಗುರಿ ಹೊಂದಿದೆ. ಬೆಂಚು ಕಾಯಿಸಿದ್ದ ಕೇನ್ ವಿಲಿಯಮ್ಸನ್ ಆಡುವ ಸಾಧ್ಯತೆ ಇದ್ದು, ಡೇವಿಡ್ ವಾರ್ನರ್, ಮನೀಷ್ ಪಾಂಡೆ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಂಡದ ಆಧಾರಸ್ತಂಭಗಳಾಗಿದ್ದಾರೆ.