ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದರೂ ಮನೆಯಿಂದ ಹೊರಗೆ ಬಂದು ಓಡಾಡುವವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸೋಮಶೇಖರ್, ಕೆಲವರು ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಅಂತವರ ಲೊಕೇಶನ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ. ಅಂತಹವರು ಹೋಂ ಕ್ವಾರಂಟೈನ್ ಅಥವಾ ಆಸ್ಪತ್ರೆಗೆ ದಾಖಲಾಗದೇ ಓಡಾಡಿಕೊಂಡಿದ್ದರೆ ಕೇಸು ದಾಖಲಿಸಲಾಗುವುದು ಎಂದರು.
ರಾಜ್ಯದಲ್ಲಿ ಜನತಾ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದೆ. ಆದರೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಿರೋದು ಎಡವಟ್ಟು ಆಗಿದೆ. ಪ್ರತಿದಿನವೂ ತರಕಾರಿ ಅಂಗಡಿ ಓಪನ್ ಆಗ್ತಿವೆ. ಆದರೆ ಜನ ವರ್ಷಪೂರ್ತಿ ಲಾಕ್ ಡೌನ್ ಆಗೋಯ್ತೆನೋ ಅನ್ನುವ ಹಾಗೆ ಕ್ಯೂ ನಿಲ್ಲುತ್ತಿರೋದು ಸಮಸ್ಯೆ ಆಗಿದೆ ಎಂದು ಹೇಳಿದರು.
ಲಾಕ್ ಡೌನ್ ಬೇಕೊ ಬೇಡ್ವೊ ಅನ್ನುವ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. 12ರ ವರೆಗೂ ಈ ನಿಯಮವೇ ಮುಂದುವರಿಯುತ್ತದೆ. 11ರ ಸಂಜೆ ಮುಂದೆ ಏನ್ ಮಾಡಬೇಕು ಎಂಬ ಬಗ್ಗೆ ಸಿಎಂ ತಿರ್ಮಾನ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.