ಪಬ್ ಜೀ ಆಟದ ವಿಚಾರದಲ್ಲಿ ಬಾಲಕನನ್ನು ಹತ್ಯೆ ಮಾಡಿದ ಘಟನೆ ಮಂಗಳೂರು ನಗರದ ಹೊರವಲಯದ ಉಳ್ಳಾಲ ಕೆಸಿರೋಡ್ ನಲ್ಲಿ ನಡೆದಿದೆ.
12 ವರ್ಷದ ಆಕೀಫ್ ಮೃತ ಬಾಲಕ. 17 ವರ್ಷದ ದೀಪಕ್ ಕೊಲೆಗೈದ ಸ್ನೇಹಿತ.
6ನೇ ತರಗತಿಯಲ್ಲಿ ಓದುತ್ತಿದ್ದ ಕೊಲೆಯಾದ ಬಾಲಕ ಆಕೀಫ್ ಯಾವತ್ತೂ ಪಬ್ ಜಿ ಆಟವಾಡುತ್ತಿದ್ದ. ಆನ್ ಲೈನ್ ಮೂಲಕ ಅನೇಕರನ್ನು ಆಟದಲ್ಲಿ ಸೋಲಿಸುತ್ತಿದ್ದ. ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿ ಪರಿಚಯವಾದ ದೀಪಕ್ ಜೊತೆ ಆಟಕ್ಕೆ ಮುಂದಾಗಿದ್ದ. ಆನ್ ಲೈನ್ ಮೂಲಕ ಆಟವಾಡಿದ ವೇಳೆ ಆಕೀಫ್ ಗೆಲುವು ಸಾಧಿಸಿದಾಗ ಸಂಶಯ ವ್ಯಕ್ತಪಡಿಸಿದ ಆರೋಪಿ ಬಾಲಕ, ನಿನ್ನ ಆಟ ಬೇರೆ ಯಾರೋ ಆಡುತ್ತಿದ್ದಾರೆ.
ಎದುರು ಬದುರಾಗಿ ಕುಳಿತು ಆಡುವ ಚಾಲೆಂಜ್ ಹಾಕಿದ್ದ. ಅದರಂತೆ ನಿನ್ನೆ ರಾತ್ರಿ ಇಬ್ಬರೂ ಜೊತೆಯಾಗಿ ಆಟವಾಡಲು ಆರಂಭಿಸಿದ್ದರು. ಆದರೆ ಆಟದಲ್ಲಿ ಆಕೀಫ್ ಸೋತಿದ್ದ. ಇದೇ ವೇಳೆ ದೀಪಕ್- ಆಕೀಫ್ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕುಪಿತಗೊಂಡ ಆಕೀಫ್, ಆರೋಪಿಯನ್ನು ದೂಡಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿ ಬಾಲಕ ದೊಡ್ಡ ಕಲ್ಲೊಂದನ್ನು ಎತ್ತಿ ಆಕೀಫ್ ಮೇಲೆ ಹಲ್ಲೆ ನಡೆಸಿದಾಗ ವಿಪರೀತ ರಕ್ತಸ್ರಾವ ಉಂಟಾದ ಆಕೀಫ್ ಸ್ಥಳದಲ್ಲೇ ಕುಸಿದುಬಿದ್ದಿದ್ದ.
ಗಾಬರಿಗೊಂಡ ಆರೋಪಿಯು ಆಕೀಫ್ ನನ್ನು ಸಮೀಪದಲ್ಲೇ ಇದ್ದ ಕಾಂಪೌಂಡ್ ಪಕ್ಕಕ್ಕೆ ಕರೆದೊಯ್ದು ಬಾಳೆ ಎಲೆ, ತೆಂಗಿನ ಗರಿಗಳನ್ನು ಮುಚ್ಚಿ ಪರಾರಿಯಾಗಿದ್ದ. ಇಂದು ಬೆಳಿಗ್ಗೆ ಸ್ಥಳೀಯರು ಆಕೀಫ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಕೃತ್ಯದ ವೇಳೆ ಆರೋಪಿ ಬಾಲಕ ಓರ್ವನೇ ಇದ್ದನೇ ಅಥವಾ ಇನ್ಯಾರೋ ಇದ್ದರು ಅನ್ನುವ ಕುರಿತು ಸ್ಥಳೀಯ ಸಿಸಿಟಿವಿ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.